ಮದುರೈ: ‘ಕೇಂದ್ರ ತನಿಖಾ ದಳವು (ಸಿಬಿಐ) ಸರ್ಕಾರದ ನಿಯಂತ್ರಣಕ್ಕೊಳಪಡದೇ ಸ್ವತಂತ್ರವಾಗಿ ತನ್ನ ಕಾರ್ಯ ನಿರ್ವಹಿಸಬೇಕು. ಸಿಬಿಐನ ನಿರ್ದೇಶಕರಿಗೆ ನೇರವಾಗಿ ಪ್ರಧಾನಿಗೆ ವರದಿ ಮಾಡಿಕೊಳ್ಳುವ ವಿಶೇಷ ಅಧಿಕಾರ ನೀಡಬೇಕು’ ಎಂದು ಬುಧವಾರ ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ನ್ಯಾಯಾಲಯವು ಗಂಭೀರವಾದ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಲು ಬಯಸಿದಾಗ ಅಲ್ಲಿ ಮಾನವ ಸಂಪನ್ಮೂಲ ಮತ್ತು ಹಣದ ಕೊರತೆಯ ಸಮಸ್ಯೆ ಎದುರಾಗುತ್ತದೆ’ ಎಂದೂ ಮದುರೈ ನ್ಯಾಯಪೀಠವು ಕಿಡಿಕಾರಿದೆ.
ರಾಮನಾಥಪುರಂ ಜಿಲ್ಲೆಯಲ್ಲಿ ನಡೆದ ₹ 300 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಕೆ. ಕಿರುಬಾಕರನ್ ಮತ್ತು ಪಿ. ಪುಗಲೆಂದಿ ಅವರನ್ನೊಳಗೊಂಡ ನ್ಯಾಯಪೀಠವು, ‘ಸಿಬಿಐ ಸ್ವತಂತ್ರವಾಗಿರಬೇಕು ಮತ್ತು ಅದು ಯಾವುದೇ ಸರ್ಕಾರದ ನಿಯಂತ್ರಣಕ್ಕೊಳಪಡದೇ ಸ್ವಾಯತ್ತವಾಗಿ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದೆ.
‘ಸಿಬಿಐಗೆ ಅಮೆರಿಕದ ಎಫ್ಬಿಐ ಹಾಗೂ ಬ್ರಿಟನ್ನ ಸ್ಕಾಟ್ಲೆಂಡ್ ಯಾರ್ಡ್ನಂತೆ ಮೂಲಸೌಕರ್ಯ ಕಲ್ಪಿಸಬೇಕು. ಸಿಬಿಐಗೆ ಅಗತ್ಯವಿರುವ ಸೌಕರ್ಯ, ಸಂಪನ್ಮೂಲ, ಅಗತ್ಯ ಸಿಬ್ಬಂದಿ ನೇಮಕ ಸೇರಿದಂತೆ ಇತರ ಸೌಕರ್ಯಗಳನ್ನು ಆರು ವಾರಗಳೊಳಗೆ ಕಲ್ಪಿಸಬೇಕು’ ಎಂದೂ ನ್ಯಾಯಾಲಯವು ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.