ADVERTISEMENT

ದೂರವಾಣಿ ಕದ್ದಾಲಿಕೆ ಆರೋಪ: ತನಿಖೆಗಾಗಿ ಸಮಿತಿ ರಚಿಸಿದ ಮಹಾರಾಷ್ಟ್ರ ಸರ್ಕಾರ

ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚನೆ

ಪಿಟಿಐ
Published 10 ಜುಲೈ 2021, 6:14 IST
Last Updated 10 ಜುಲೈ 2021, 6:14 IST
ಪ್ರಾತಿನಿಧಿಕ ಚಿತ್ರ  (Getty Images)
ಪ್ರಾತಿನಿಧಿಕ ಚಿತ್ರ (Getty Images)    

ಮುಂಬೈ: ದೂರವಾಣಿ ಕದ್ದಾಲಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಮುಖಂಡ ನಾನಾ ಪಟೊಲೆ ಆರೋಪಿಸಿರುವ ಹಿನ್ನೆಲೆಯಲ್ಲಿ, ಈ ಪ್ರಕರಣದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಡಿಜಿಪಿ ಸಂಜಯ್‌ ಪಾಂಡೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ.

ರಾಜ್ಯ ಗುಪ್ತಚರ ಇಲಾಖೆ ಆಯುಕ್ತರು ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರು (ವಿಶೇಷ ಶಾಖೆ) ಸಮಿತಿಯ ಸದಸ್ಯರಾಗಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಿ ಮೂರು ತಿಂಗಳೊಳಗೆ ವಿಧಾನಸಭೆಗೆ ವರದಿ ಸಲ್ಲಿಸುವಂತೆ ಶುಕ್ರವಾರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆಯ ಎರಡು ದಿನಗಳ ಮುಂಗಾರು ಅಧಿವೇಶನದಲ್ಲಿ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು ದೂರವಾಣಿ ಕದ್ದಾಲಿಕೆ ಆರೋಪದ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸುವ ಕುರಿತು ಪ್ರಸ್ತಾಪಿಸಿದ್ದರು.

‘2016-17ರಲ್ಲಿ ತಾವು ಸಂಸದರಾಗಿದ್ದ ಸಂದರ್ಭದಲ್ಲಿ ದೂರವಾಣಿ ಕದ್ದಾಲಿಸಲಾಗಿದೆ. ಆಗ ರಾಜ್ಯದಲ್ಲಿ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು‘ ಎಂದು ಪಟೊಲೆ ಆರೋಪಿಸಿದ್ದರು. ‘ತಮ್ಮ ದೂರವಾಣಿಯನ್ನು ಡ್ರಗ್-ಪೆಡ್ಲರ್ ಅಮ್ಜದ್ ಖಾನ್ ಸೇರಿದ್ದು ಎಂದುಕೊಂಡು ಕದ್ದಾಲಿಸಲಾಗಿತ್ತು‘ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.