ಮುಂಬೈ/ ಪುಣೆ: ಹಿಂದೂ ವಿರೋಧಿ ಹೇಳಿಕೆ ನೀಡಿದ ಆರೋಪ ಹೊಂದಿರುವ ವಿದ್ಯಾರ್ಥಿ ನಾಯಕ ಶರಜೀಲ್ ಉಸ್ಮಾನಿಯನ್ನು ಬೆಂಬಲಿಸಿದ ಎಲ್ಗರ್ ಪರಿಷತ್ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರ ಬಿಜೆಪಿ ಭಾನುವಾರ ಒತ್ತಾಯಿಸಿದೆ.
‘ಎಲ್ಗರ್ ಪರಿಷತ್ ಸಮಾಜದಲ್ಲಿ ಒಡಕು ಮೂಡಿಸುತ್ತಿದೆ. ಉಸ್ಮಾನಿಯ ಹಿಂದೂ ವಿರೋಧಿ ಟೀಕೆಗಳನ್ನು ಬೆಂಬಲಿಸುವ ಮೂಲಕ, ಎಲ್ಗರ್ ಪರಿಷತ್ ಅದರ ನಿಜವಾದ ಉದ್ದೇಶಗಳು ಏನೆಂದು ಸಾಬೀತುಪಡಿಸುತ್ತಿದೆ’ ಎಂದು ರಾಜ್ಯ ಬಿಜೆಪಿ ವಕ್ತಾರ ಕೇಶವ್ ಉಪಾಧ್ಯೆ ಟ್ವೀಟ್ ಮಾಡಿದ್ದಾರೆ.
‘ನಾವು ಶರಜೀಲ್ ಉಸ್ಮಾನಿ ಪರವಾಗಿದ್ದೇವೆ. ಉಸ್ಮಾನಿ 23 ವರ್ಷದ ಮುಸ್ಲಿಂ ವಿದ್ಯಾರ್ಥಿ. ಶರಜೀಲ್ ಮುಸ್ಲಿಂ ಎಂಬ ಕಾರಣಕ್ಕೆ ಅವರ ಭಾಷಣಕ್ಕೆ ವಿಕೃತ, ಹಿಂಸಾತ್ಮಕ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಮುಸ್ಲಿಂ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಯಿತು’ ಎಂದು ಆಯೋಜಕರು ಹೇಳಿಕೆ ನೀಡಿದ್ದರು.
ಜ.30ರಂದು ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಶರಜೀಲ್ ಉಸ್ಮಾನಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿದೆ. ಉಸ್ಮಾನಿ ವಿರುದ್ಧ ಸೆಕ್ಷನ್ 153 ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.