ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್ಮತ್ತು ಎನ್ಸಿಪಿಗೆ ಸೇರಿದ ನಾಲ್ವರು ಶಾಸಕರು ಮಂಗಳವಾರ ರಾಜೀನಾಮೆ ನೀಡಿದ್ದು, ಬುಧವಾರ ಬಿಜೆಪಿಗೆ ಸೇರುವ ಸಾಧ್ಯತೆ ಇದೆ.
ಎನ್ಸಿಪಿ ಶಾಸಕರಾದಶಿವೇಂದ್ರ ಸಿನ್ಹ ರಾಜೇ ಭೋಸ್ಲೆ (ಸತಾರ), ವೈಭವ್ ಪಿಚಡ್ (ಅಕೋಲೆ) ಮತ್ತು ಸಂದೀಪ್ ನಾಯ್ಕ್ (ಐರೋಳಿ) ಹಾಗೂ ಕಾಂಗ್ರೆಸ್ ಶಾಸಕ ಕಾಳಿದಾಸ್ ಕೋಲಂಬ್ಕರ್ (ನಾಯ್ಗಾಂವ್) ಅವರು ಸ್ಪೀಕರ್ ಹರಿಭಾವು ಬಾಗಡೆ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಇನ್ನೆರಡು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಾಲ್ವರು ಬುಧವಾರ ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಚುನಾವಣೆಯಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ, ಬಿಜೆಪಿ ಕನಿಷ್ಠ 220 ಸ್ಥಾನಗಳಲ್ಲಿ ಗೆಲುವಿನ ನಿರೀಕ್ಷೆ ಹೊಂದಿದೆ.
‘ನಾನು ನನ್ನ ವಿಧಾನಸಭಾ ಕ್ಷೇತ್ರದ ಹಿತಾಸಕ್ತಿ ಕಾಪಾಡಲು ಹೆಚ್ಚು ಆಸಕ್ತಿ ಹೊಂದಿದ್ದೇನೆ’ ಎಂದು ಶಾಸಕ ಶಿವೇಂದ್ರ ಸಿನ್ಹ ಹೇಳಿದ್ದಾರೆ. ಅಹಮ್ಮದ್ ನಗರ ಜಿಲ್ಲೆಯ ಅಕೋಲೆ ತೆಹಸಿಲ್ನವರಾದ ವೈಭವ್ ಪಿಚಡ್, ಎನ್ಸಿಪಿಯ ಮಾಜಿ ಸಚಿವ ಮಧುಕರ್ ಪಿಚಡ್ ಅವರ ಪುತ್ರ.ಮುಂಬೈನವರಾದ ಕಾಂಗ್ರೆಸ್ ಶಾಸಕ ಕಾಳಿದಾಸ್ ಕೋಲಂಬ್ಕರ್ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.