ಲಾತೂರ್: ಮಾಂಜ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಟ್ಟ ನಂತರ ಮರಾಠವಾಡದ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೊರಿದ್ದು, ಪೊಹರೆಗಾಂವ್ ಹಳ್ಳಿಯಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ವಾಯುಪಡೆ ಸಿಬ್ಬಂದಿ ಬುಧವಾರ ಹೆಲಿಕಾಪ್ಟರ್ ಮೂಲಕ ರಕ್ಷಿಸಿದ್ದಾರೆ.
ನಾಗೋರಾವ್ ಕಿಸಾನ್ ಟಿಕಾನಾರೆ (50), ಅವರ ಪತ್ನಿ ರುಕ್ಮಾಬಾಯಿ (45) ಮತ್ತು ಮಗ ಚಂದ್ರಕಾಂತ್ (11) ಅವರು ರೇನಾಪುರ ತಹಸಿಲ್ನ ಪೊಹರೆಗಾಂವ್ ಹಳ್ಳಿಯಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮರಾಠವಾಡ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ರಕ್ಷಿಸಲು ಎನ್ಡಿಆರ್ಎಫ್ ಸಜ್ಜುಗೊಳಿಸಲಾಗಿದೆ. ಪರಿಹಾರ ಕಾರ್ಯಗಳಿಗಾಗಿ ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ. ಐಎಎಫ್ ತಂಡ, ಕೆಲವು ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ.
ಬುಧವಾರ ಮಾಂಜ್ರಾ ಅಣೆಕಟ್ಟಿನ ಒಟ್ಟು 18 ಗೇಟ್ಗಳಲ್ಲಿ 12 ಅನ್ನು ಮುಚ್ಚಲಾಯಿತು. ಹೀಗಾಗಿ ಜಲಾಶಯದಿಂದ ನೀರಿನ ಹೊರಹರಿವು ಕಡಿಮೆಯಾಯಿತು.
ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆ, ಪ್ರವಾಹ, ಸಿಡಿಲಿನಿಂದಾಗಿ 13 ಮಂದಿ ಮೃತಪಟ್ಟಿದ್ದಾರೆ. ಎನ್ಡಿಆರ್ಎಫ್ ತಂಡ 500 ಮಂದಿಯನ್ನು ರಕ್ಷಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.