ಅಲಿಗಢ: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಹಿಂದೂ ವಿದ್ಯಾರ್ಥಿಗಳಿಗಾಗಿ ದೇವಾಲಯ ನಿರ್ಮಿಸಬೇಕೆಂದು ಭಾರತೀಯ ಜನತಾ ಯುವ ಮೋರ್ಚಾ ಒತ್ತಾಯಿಸಿದೆ.
ಈ ಬಗ್ಗೆ ಅಲಿಗಢ ವಿವಿಯ ಉಪ ಕುಲಪತಿ ತಾರೀಖ್ ಮನ್ಸೂರ್ ಅವರಿಗೆ ಭಾರತೀಯ ಜನತಾ ಯುವ ಮೋರ್ಚಾದಜಿಲ್ಲಾ ಅಧ್ಯಕ್ಷ ಮುಖೇಶ್ ಸಿಂಗ್ ಲೋಧಿ ಪತ್ರ ಬರೆದಿದ್ದು, ಈ ಪತ್ರಕ್ಕೆ 15 ದಿನಗಳೊಳಗೆ ಉತ್ತರಿಸಬೇಕು.ಇಲ್ಲವಾದರೆ ನಮ್ಮ ಕಾರ್ಯಕರ್ತರು ವಿವಿ ಕ್ಯಾಂಪಸ್ ಒಳಗೆ ನುಗ್ಗಿ ಮೂರ್ತಿ ಸ್ಥಾಪನೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಆಲಿಗಢ ಮಸ್ಲಿಂ ವಿಶ್ವ ವಿದ್ಯಾನಿಲಯದ (ಎಎಂಯು) ಸಂಸ್ಥಾಪಕ ಸರ್ ಸಯ್ಯದ್ ಅಹ್ಮದ್ ಖಾನ್ ಅವರು ಹಿಂದೂ ಮತ್ತು ಮುಸ್ಲಿಮರು ಆಲಿಗಢ ಮಸ್ಲಿಂ ವಿಶ್ವ ವಿದ್ಯಾನಿಲಯದ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದ್ದರು.ಹಾಗಾಗಿ ಕ್ಯಾಂಪಸ್ನೊಳಗೆ ದೇವಾಲಯ ನಿರ್ಮಿಸಲು ಉಪ ಕುಲಪತಿ ಅನುಮತಿ ನೀಡಬೇಕು ಎಂದು ಲೋಧಿ ಪತ್ರದಲ್ಲಿ ಬರೆದ್ದಾರೆ.
ಎಎಂಯುನಲ್ಲಿ ಸಾವಿರಾರು ಹಿಂದೂ ವಿದ್ಯಾರ್ಥಿಗಳು ಕಲಿಯುತ್ತಿದ್ದು ವಿವಿಯೊಳಗೆ ಯಾವುದೇ ದೇವಾಲಯ ಇಲ್ಲದೇ ಇರುವುದರಿಂದ ಪ್ರಾರ್ಥನೆ ಸಲ್ಲಿಸಲು ಅವರು ಕಷ್ಟ ಪಡುತ್ತಿದ್ದಾರೆ.ದೇವಾಲಯ ನಿರ್ಮಿಸಿದರೆ ಹಿಂದೂ- ಮುಸ್ಲಿಂ ನಡುವಿನ ಒಗ್ಗಟ್ಟು ಬಲಗೊಳ್ಳುವುದಲ್ಲದೆ ದೇಶಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ.ಉಪ ಕುಲಪತಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯವನ್ನು ಪಾಲಿಸಿ ದೇವಾಲಯ ನಿರ್ಮಾಣಕ್ಕೆ ಜಮೀನು ನೀಡಬೇಕು ಎಂದು ಲೋಧಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಎಂಯು ವಕ್ತಾರ ಶಫೀ ಕಿದ್ವಾಯಿ, ಲೋಧಿ ಅವರಿಂದ ಯಾವುದೇ ಪತ್ರ ಈವರೆಗೆ ವಿವಿಗೆ ತಲುಪಿಲ್ಲ .ಹಾಗಾಗಿ ಈ ಹೊತ್ತಿನಲ್ಲಿ ಈ ವಿಷಯದ ಬಗ್ಗೆ ಮಾತನಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.