ನವದೆಹಲಿ: ‘ಇದೇ ಸಂಕ್ರಾಂತಿಯಂದು ಕ್ರಾಂತಿ ಆಗುತ್ತದೆ ಎಂದು ಬಿಜೆಪಿ ಹೇಳಿತ್ತು. ಆದರೆ, ಯಾವ ಕ್ರಾಂತಿಯೂ ಆಗಲಿಲ್ಲ. ಸಂಕ್ರಾಂತಿ ಬಹಳ ಚೆನ್ನಾಗಿ ನಡೆಯಿತು’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.
ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಹೀಗೆ ಶಾಸಕರನ್ನು ಖರೀದಿ ಮಾಡುವ ಪರಂಪರೆಯೇ ಬಿಜೆಪಿಗೆ ಇದೆ. ಗೋವಾ, ಮಣಿಪುರ, ಉತ್ತರಾಖಂಡ, ಅರುಣಾಚಲ ಪ್ರದೇಶದಲ್ಲಿ ಇದೇ ವಿಧಾನಗಳಿಂದ ಸರ್ಕಾರ ರಚಿಸಿದ್ದಾರೆ. ಕರ್ನಾಟಕದಲ್ಲಿ ಈ ಮೊದಲೂ ಇಂತಹ ಕೆಲಸ ಮಾಡಿದ್ದರು. ಖರೀದಿ ಮಾಡಿ ಸರ್ಕಾರ ರಚಿಸುವ ಕೆಲಸಕ್ಕೆ ಯಡಿಯೂರಪ್ಪ ಕೈ ಹಾಕಿದ್ದರು. ಆದರೆ, ವಿಶ್ವಾಸಮತ ಯಾಚನೆಗೆ ಮುನ್ನವೇ ಸೋಲೊಪ್ಪಿಕೊಂಡು ರಾಜೀನಾಮೆ ನೀಡಿದರು. ಈಗ ಮತ್ತೆ ಅಂತಹುದೇ ಪ್ರಯತ್ನ ನಡೆಸಿದ್ದಾರೆ’ ಎಂದರು.
‘ಕೇಂದ್ರ ಬಿಜೆಪಿ ಸರ್ಕಾರ ಮತ್ತು ಬಿಜೆಪಿಯಿಂದ ಈ ಕಸರತ್ತಿಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ನಮ್ಮ ಮೈತ್ರಿ ಸರ್ಕಾರದ ಎಲ್ಲ 118 ಮಂದಿ ಶಾಸಕರು ಒಟ್ಟಿಗಿದ್ದಾರೆ. ಯಾರೂ ಎಲ್ಲೂ ಹೋಗುತ್ತಿಲ್ಲ. ಆದರೆ, ತಮ್ಮ ಬಳಿ ಕಾಂಗ್ರೆಸ್ಸಿನ 10-15 ಮಂದಿ ಶಾಸಕರು ಮುಂಬಯಿಯಲ್ಲಿದ್ದಾರೆ, ದಿಲ್ಲಿಯಲ್ಲಿದ್ದಾರೆ ಎಂದು ಬಿಜೆಪಿಯವರು ವದಂತಿ ಹಬ್ಬಿಸಿ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಕಿಡಿಕಾರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.