ಪುರ್ನಿಯಾ: ‘ಮತದಾರರ ಅಧಿಕಾರ ಯಾತ್ರೆ’ಯ ಅಂಗವಾಗಿ ಕಾಂಗ್ರೆಸ್ ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪ್ಪಿಕೊಂಡು, ಭುಜಕ್ಕೆ ಮುತ್ತಿಟ್ಟ ಪ್ರಸಂಗ ನಡೆದಿದೆ.
ಈ ಘಟನೆಯು ರಾಹುಲ್ ಅವರನ್ನು ಕ್ಷಣಕಾಲ ಆಶ್ಚರ್ಯಚಕಿತರನ್ನಾಗಿ ಮಾಡಿತ್ತು.
ನಡೆದದ್ದೇನು:
ಪುರ್ನಿಯಾದಿಂದ ಅರಾರಿಯಾಗೆ ಬೈಕ್ ರ್ಯಾಲಿಯಲ್ಲಿ ರಾಹುಲ್ ಸಾಗುತ್ತಿದ್ದರು. ಅವರ ಪಕ್ಕದಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ನೂರಾರು ಸವಾರರು ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಕಪ್ಪು ಪ್ಯಾಂಟ್ ಮತ್ತು ಕೆಂಪು ಶರ್ಟ್ ಧರಿಸಿದ್ದ ಯುವಕನೊಬ್ಬ ರ್ಯಾಲಿಯ ಒಳನುಗ್ಗಿ ರಾಹುಲ್ ಅವರ ಬಳಿ ಓಡಿ ಬಂದು ಅವರನ್ನು ಅಪ್ಪಿಕೊಂಡು, ಭುಜಕ್ಕೆ ಮುತ್ತು ಕೊಟ್ಟರು.
ಇದರಿಂದ ಕಕ್ಕಾಬಿಕ್ಕಿಯಾದ ರಾಹುಲ್ ಬೈಕ್ ಅನ್ನು ಸಮತೋಲನಕ್ಕೆ ತರಲು ಯತ್ನಿಸುತ್ತಿದ್ದರು. ಅಷ್ಟರಲ್ಲಿ ಧಾವಿಸಿ ಬಂದ ಭದ್ರತಾ ಸಿಬ್ಬಂದಿ, ಮುತ್ತುಕೊಟ್ಟ ಯುವಕನ ಕೆನ್ನೆಗೆ ಥಳಿಸಿ ಪಕ್ಕಕ್ಕೆ ತಳ್ಳಿದರು.
ಎಸ್.ಪಿ ಪ್ರತಿಕ್ರಿಯೆ:
ಭದ್ರತಾ ಉಲ್ಲಂಘನೆ ಕುರಿತು ಪ್ರತಿಕ್ರಿಯಿಸಿರುವ ಪುರ್ನಿಯಾದ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಸ್ವೀಟಿ ಸೆಹ್ರಾವತ್, ರಾಹುಲ್ ಗಾಂಧಿ ಅವರನ್ನು ‘ಕ್ಲೋಸ್ ಪ್ರೊಟೆಕ್ಷನ್ ತಂಡ’(ಸಿಪಿಟಿ) ಕರೆದೊಯ್ಯುತ್ತಿತ್ತು. ಅದು ಪರಿಸ್ಥಿತಿಯನ್ನು ನಿಭಾಯಿಸಿದಂತೆ ತೋರುತ್ತಿದೆ. ಒಂದು ವೇಳೆ ಸಿಪಿಟಿ ಅವರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ವಿವರ ನೀಡಿದರೆ ಸಂಬಂಧಪಟ್ಟ ವ್ಯಕ್ತಿಯನ್ನು ಪತ್ತೆಹಚ್ಚಿ, ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ರ್ಯಾಲಿಯಲ್ಲಿ ಬಿಹಾರದ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್ ಸೇರಿದಂತೆ ಕೆಲ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಇದ್ದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಿಸಿಟಿವಿ ದೃಶ್ಯಾವಗಳಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್ಪಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.