ADVERTISEMENT

ಸಾಧುವಿನ ಸೋಗಿನಲ್ಲಿ ಚಿನ್ನಾಭರಣ ವರ್ತಕನ ಪತ್ನಿಗೆ 1.75 ಕೋಟಿ ವಂಚನೆ- ಬಂಧನ

ಪಿಟಿಐ
Published 12 ಜುಲೈ 2021, 7:55 IST
Last Updated 12 ಜುಲೈ 2021, 7:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಿಷಿಕೇಶ: ಸಾಧುವಿನ ಸೋಗಿನಲ್ಲಿ ಚಿನ್ನಾಭರಣ ವರ್ತಕನ ಪತ್ನಿಗೆ ಸುಮಾರು 1.75 ಕೋಟಿ ರೂ. ಮೌಲ್ಯದ ನಗದು ಮತ್ತು ಆಭರಣಗಳನ್ನು ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಇಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮಹೇಂದ್ರ ರೋದೆ ಅಲಿಯಾಸ್ ಯೋಗಿ ಪ್ರಿಯವ್ರತ್ ಅನಿಮೇಶ್ ಎಂಬಾತನನ್ನು ಲಾಲ್ ತಪ್ಪರ್ ಪ್ರದೇಶದ ನೇಚರ್ ವಿಲ್ಲಾದ 21ನೇ ಕಾಟೇಜ್‌ನಲ್ಲಿ ಭಾನುವಾರ ರಾತ್ರಿ ಬಂಧಿಸಲಾಗಿದೆ. ಆರೋಪಿ ಬಳಿಯಿಂದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ ಎಂದು ಡಿಎಸ್‌ಪಿ ಚಂದ್ರ ಧೌಂಡಿಯಾಲ್ ತಿಳಿಸಿದ್ದಾರೆ.

ವಂಚಕ ಬರೆದಿದ್ದ 'ಮನಸ್‌ ಮೋತಿʼ ಎಂಬ ಪುಸ್ತಕವನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಬಿಡುಗಡೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

14 ದಿನಗಳ ನ್ಯಾಯಾಂಗ ಬಂಧನಕ್ಕೆ ಕರೆದೊಯ್ದ ನಂತರ ಆತನ ವಿಚಾರಣೆ ನಡೆಸಲಾಗುತ್ತಿದೆ. ತನ್ನ ಹೆಂಡತಿಯನ್ನು ವಂಚಿಸಿ ಸುಮಾರು 1.75 ಕೋಟಿ ರೂ.ಗಳ ಮೌಲ್ಯದ ನಗದು ಮತ್ತು ಆಭರಣಗಳನ್ನು ದೋಚಿದ್ದಾರೆ ಎಂದು ರಿಷಿಕೇಶದ ಪ್ರಸಿದ್ಧ ಆಭರಣ ವ್ಯಾಪಾರಿ ಹಿತೇಂದ್ರ ಪನ್ವಾರ್ ಅವರು ನೀಡಿದ ದೂರಿನ ಆಧಾರದ ಅನಿಮೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಎಸ್‌ಪಿ ತಿಳಿಸಿದ್ದಾರೆ.

ದೂರಿನ ಪ್ರಕಾರ, ಚಿನ್ನಾಭರಣ ವ್ಯಾಪಾರಿಯ ಪತ್ನಿಯು ಮಾನಸಿಕವಾಗಿ ಅಸ್ವಸ್ಥ ಮತ್ತು ಚಿಕಿತ್ಸೆಯ ಅಗತ್ಯವಿರುವುದರಿಂದಾಗಿಯೇ ಮೋಸಗಾರನು ಬೀಸಿದ ಬಲೆಗೆ ಬಿದ್ದಿದ್ದಾಳೆ ಎನ್ನಲಾಗಿದೆ.

ರಾಜಕಾರಣಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳೊಂದಿಗೆ ಛಾಯಾಚಿತ್ರಗಳನ್ನು ತೆಗೆಸಿಕೊಂಡು ಅವುಗಳನ್ನು ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಪರಿಚಯ ಮಾಡಿಕೊಂಡು ಮೋಸ ಮಾಡುತ್ತಿದ್ದ. ಸಾಧುವಿನ ವೇಷದಲ್ಲಿ ತಿರುಗಾಡುತ್ತಾ ವ್ಯಕ್ತಿಗಳನ್ನು ಗುರಿಯಾಗಿಸಿ ಅವರನ್ನು ವಂಚಿಸಿ ಹಣವನ್ನು ದೋಚುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹರಿಯಾಣದ ಕರ್ನಾಲ್‌ನಲ್ಲಿ ಅನಿಮೆಶ್ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಎರಡು ಬಾರಿ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಲೂಟಿ ಮಾಡಿದ ನಗದು ಮತ್ತು ಆಭರಣಗಳನ್ನು ಆತನಿಂದ ವಶಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಡಿಎಸ್ಪಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.