ADVERTISEMENT

ಮಣಿಪುರ ಹಿಂಸಾಚಾರ: ಭುಗಿಲೆದ್ದ ನಾಗಾ ಆಕ್ರೋಶ

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 0:30 IST
Last Updated 23 ಜುಲೈ 2023, 0:30 IST
ಹಿಂಸಾಚಾರ ನಿಯಂತ್ರಣಕ್ಕೆ ಆಗ್ರಹಿಸಿ ಮಣಿಪುರದ ಚುರಚಂದಪುರ ನಗರದಲ್ಲಿ ಐಟಿಎಲ್‌ಎಫ್‌ ಸಂಘಟನೆಯ ನೇತೃತ್ವದಡಿ ಮಹಿಳೆಯರು ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ಹಿಂಸಾಚಾರ ನಿಯಂತ್ರಣಕ್ಕೆ ಆಗ್ರಹಿಸಿ ಮಣಿಪುರದ ಚುರಚಂದಪುರ ನಗರದಲ್ಲಿ ಐಟಿಎಲ್‌ಎಫ್‌ ಸಂಘಟನೆಯ ನೇತೃತ್ವದಡಿ ಮಹಿಳೆಯರು ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ಇಂಫಾಲ್‌ : ಮಹಿಳೆಯರ ಬೆತ್ತಲೆ ಮೆರವಣಿಗೆ ಕೃತ್ಯ ಖಂಡಿಸಿ ಮಣಿಪುರದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದೆ ನಾಗಾ ಸಂಘಟನೆಗಳು ಬೇಡಿಕೆ ಮುಂದಿಟ್ಟಿವೆ.

ಈ ನಡುವೆಯೇ ಕುಕಿ ಬುಡಕಟ್ಟು ಸಮುದಾಯದವರಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ರೂಪಿಸಬೇಕು ಎಂದು ಕೂಗು ಮತ್ತೆ ಕೇಳಿಬಂದಿದೆ. ಈ ಸಮುದಾಯ ಹೆಚ್ಚಿರುವ ಚುರಚಂದಪುರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕುಕಿ ಸಮುದಾಯದವರು, ತ್ವರಿತವಾಗಿ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ನಾಗಾ ನಾಗರಿಕ ಸೊಸೈಟಿ, ಯುನೈಟೆಡ್‌ ನಾಗಾ ಕೌನ್ಸಿಲ್‌ (ಯುಎನ್‌ಸಿ), ಅಖಿಲ ಮಣಿಪುರ ನಾಗಾ ವಿದ್ಯಾರ್ಥಿಗಳ ಒಕ್ಕೂಟ (ಎಎನ್‌ಎಸ್‌ಎಎಂ), ನಾಗಾ ಪೀಪಲ್‌ ಫ್ರಂಟ್‌, ಕೃತ್ಯವನ್ನು ಕಟುವಾಗಿ ಖಂಡಿಸಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿವೆ. 

ADVERTISEMENT

ಅಮಾನವೀಯ ಕೃತ್ಯ ಎಸಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಶೀಘ್ರಗತಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಆ ಮೂಲಕ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದು ಯುಎನ್‌ಸಿ ಆಗ್ರಹಿಸಿದೆ.

ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ನಡೆಸಿರುವುದು ಖಂಡನೀಯ. ಇದು ರಾಜ್ಯ ಸರ್ಕಾರ ಹಾಗೂ ಪೊಲೀಸರ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ದೂರಿದೆ.

‌* ಕಣಿವೆ ರಾಜ್ಯದಲ್ಲಿ ಅಧ್ಯಯನಕ್ಕೆ ತೊಡಕಾಗಿದೆ. ಹಾಗಾಗಿ, ಬೇರೆ ವಿ.ವಿಗಳಿಗೆ ನಮ್ಮನ್ನು ವರ್ಗಾವಣೆ ಮಾಡಬೇಕು ಎಂದು ಮಣಿಪುರ ವಿಶ್ವವಿದ್ಯಾಲಯದ 99 ವಿದ್ಯಾರ್ಥಿಗಳು ಬೇಡಿಕೆ ಮುಂದಿಟ್ಟಿದ್ದಾರೆ.

* ಮಣಿಪುರದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದ್ದು, ಶಾಂತಿ ಪುನರ್‌ ಸ್ಥಾಪನೆಗಾಗಿ ಮಧ್ಯಪ್ರವೇಶಿಸುವಂತೆ ಕೋರಿ ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್‌ ಸೂರೆನ್‌ ಅವರು, ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾರೆ.

ಮಣಿಪುರದ ಸದ್ಯದ ಸ್ಥಿತಿಗತಿ ಬಗ್ಗೆ ಕೇಂದ್ರ ಸರ್ಕಾರವು ಸಂಸತ್‌ ಅಧಿವೇಶನದಲ್ಲಿಯೇ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರ ನೀಡಲು ಸಿದ್ಧವಿದೆ
ಕಿರಣ್‌ ರಿಜಿಜು, ಕೇಂದ್ರ ಭೂವಿಜ್ಞಾನ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.