ಸಾವು
(ಪ್ರಾತಿನಿಧಿಕ ಚಿತ್ರ)
ಜೈಪುರ: ಇಲ್ಲಿನ ಸೀತಾಪುರ ಕೈಗಾರಿಕಾ ಪ್ರದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಕಣಗಳನ್ನು ಹೆಕ್ಕಲು ಬಲವಂತವಾಗಿ ಸೆಪ್ಟಿಕ್ ಟ್ಯಾಂಕ್ಗೆ ಇಳಿಸಿದ್ದ ಕಾರ್ಮಿಕರಲ್ಲಿ ನಾಲ್ವರು ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆ. ಮತ್ತಿಬ್ಬರು ಕಾರ್ಮಿಕರು ತೀವ್ರ ಅಸ್ವಸ್ಥಗೊಂಡಿದ್ದಾರೆ.
ಆಭರಣ ವಲಯದ ‘ಜಿ’ ಬ್ಲಾಕ್ನಲ್ಲಿರುವ ಆಭರಣ ತಯಾರಿಕೆ ಕಾರ್ಖಾನೆಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಮೃತರನ್ನು ಸಂಜೀವ್ ಪಾಲ್, ಹಿಮಾಂಶು ಸಿಂಗ್, ರೋಹಿತ್ ಪಾಲ್ ಮತ್ತು ಅರ್ಪಿತ್ ಯಾದವ್ ಎಂದು ಗುರುತಿಸಲಾಗಿದೆ. ಅಜಯ್ ಚೌಹಾಣ್ ಮತ್ತು ರಾಜ್ಪಾಲ್ ಅವರನ್ನು ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಿತ್ ಪಾಲ್ ಮತ್ತು ಸೂರಜ್ ಪಾಲ್ ಅವರು ಪ್ರಾಥಮಿಕ ಚಿಕಿತ್ಸೆ ಪಡೆದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹತ್ತು ಅಡಿಯ ಟ್ಯಾಂಕ್ನಲ್ಲಿ ತೀವ್ರ ಶಾಖ ಮತ್ತು ವಿಷಕಾರಿ ಅನಿಲಗಳು ಇದ್ದ ಕಾರಣಕ್ಕೆ ಕಾರ್ಮಿಕರು ಟ್ಯಾಂಕ್ಗೆ ಇಳಿಯಲು ನಿರಾಕರಿಸಿದ್ದರು. ಆದರೆ, ಕಂಪನಿಯ ಆಡಳಿತವು ಹೆಚ್ಚುವರಿ ಹಣ ನೀಡುವ ಭರವಸೆಯೊಂದಿಗೆ ಅವರನ್ನು ಟ್ಯಾಂಕ್ಗೆ ಇಳಿಸಿದ್ದರು. ಟ್ಯಾಂಕ್ಗೆ ಇಳಿದಿದ್ದ ಕಾರ್ಮಿಕರು ಉಸಿರಾಟ ಸಮಸ್ಯೆ ಕಾಣಿಸಿ ಪ್ರಜ್ಞೆ ಕಳೆದುಕೊಂಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.