ADVERTISEMENT

ಉತ್ತರಪ್ರದೇಶದಲ್ಲೂ ಜಾತಿ ಗಣತಿ ಮಾಡಿ: ಮಾಯಾವತಿ ಆಗ್ರಹ

ಪಿಟಿಐ
Published 3 ಅಕ್ಟೋಬರ್ 2023, 14:28 IST
Last Updated 3 ಅಕ್ಟೋಬರ್ 2023, 14:28 IST
ಮಾಯಾವತಿ 
ಮಾಯಾವತಿ    

ಲಖನೌ: ಉತ್ತರ ಪ್ರದೇಶ ಸರ್ಕಾರವೂ ರಾಜ್ಯದಲ್ಲಿ ಜಾತಿ ಗಣತಿ ಮಾಡಬೇಕು ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಮಂಗಳವಾರ ಒತ್ತಾಯಿಸಿದ್ದಾರೆ.

ಜಾತಿ ಸಮೀಕ್ಷೆಯನ್ನು ಕೆಲವು ಪಕ್ಷಗಳು ವಿರೋಧಿಸಬಹುದು. ಆದರೆ, ಇತರೆ ಹಿಂದುಳಿದ ಸಮುದಾಯಗಳಿಗೆ (ಒಬಿಸಿ) ನ್ಯಾಯ ದೊರಕಿಸಿಕೊಡಲು ಇರುವ ಏಕೈಕ ಮಾರ್ಗವಿದು ಎಂದು ಅವರು ಪ್ರತಿಪಾದಿಸಿದ್ದಾರೆ. 

‘ಬಿಹಾರ ಸರ್ಕಾರ ಬಹಿರಂಗಪಡಿಸಿದ ಜಾತಿ ಗಣತಿ ವರದಿ ಬಗ್ಗೆ ಎಲ್ಲ ಕಡೆ ಚರ್ಚೆ ನಡೆಯುತ್ತಿದೆ. ಈ ಕುರಿತು ಕೆಲವು ಪಕ್ಷಗಳು ಇರುಸು ಮುರುಸುಗೊಂಡಿವೆ. ಆದರೆ, ಇತರೆ ಹಿಂದುಳಿದ ವರ್ಗಗಳಿಗೆ ಸಾಂವಿಧಾನಿಕ ಹಕ್ಕು ದೊರಕಿಸಿಕೊಡುವ ಬಿಎಸ್‌ಪಿಯ ಸುದೀರ್ಘವಾದ ಹೋರಾಟಕ್ಕೆ ಸಂದ ಮೊದಲ ಜಯ ಇದಾಗಿದೆ’ ಎಂದು ‘ಎಕ್ಸ್‌’ ವೇದಿಕೆಯಲ್ಲಿ ತಿಳಿಸಿದ್ದಾರೆ. 

ADVERTISEMENT

ನಿರ್ಲಕ್ಷಿತ ಬಹುಜನ ಸಮಾಜದ ಪರವಾಗಿ ದೇಶದ ರಾಜಕೀಯ ಹೊಸ ತಿರುವು ತೆಗೆದುಕೊಳ್ಳುತ್ತಿರುವುದು ಸಂತಸದ ಸಂಗತಿ. ರಾಜ್ಯದ ಜನರ ಭಾವನೆಗಳಿಗೆ ಬೆಲೆಕೊಟ್ಟು ಉತ್ತರ ಪ್ರದೇಶ ಸರ್ಕಾರವೂ ರಾಜ್ಯದಲ್ಲಿ ಜಾತಿ ಗಣತಿಯನ್ನು ತಕ್ಷಣವೇ ನಡೆಸಬೇಕು. ಅದರ ವರದಿಯನ್ನು ಬಹಿರಂಗಗೊಳಿಸಬೇಕು. ರಾಷ್ಟ್ರ ಮಟ್ಟದಲ್ಲಿ ಜಾತಿ ಗಣತಿ ಮಾಡಿದಾಗ ಮಾತ್ರವೇ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಜತೆಗೆ ನಿರ್ಲಕ್ಷಿತ ಸಮುದಾಯಕ್ಕೆ ಅವರ ಹಕ್ಕುಗಳನ್ನು ನೀಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.