ADVERTISEMENT

ಮುಫ್ತಿ, ಪುತ್ರಿ ಗೃಹಬಂಧನ: ‘ವೈಯಕ್ತಿಕ ಸ್ವಾತಂತ್ರ್ಯ‘ ದುರ್ಬಳಕೆ ಆರೋಪ

ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲ

ಪಿಟಿಐ
Published 27 ನವೆಂಬರ್ 2020, 9:12 IST
Last Updated 27 ನವೆಂಬರ್ 2020, 9:12 IST
 ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಬಂಧಿತರಾಗಿರುವ ಪಿಡಿಪಿ ನಾಯಕ ವಹೀದ್ ಉರ್ ರೆಹಮಾನ್ ಪರ‍್ರಾ ಅವರ ನಿವಾಸಕ್ಕೆ ಭೇಟಿ ನೀಡದಂತೆ ತಡೆಯಲು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ಅವರ ಪುತ್ರಿ ಇಲ್ಟಿಜಾ ಅವರನ್ನು ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಆಡಳಿತ ಅವರ ನಿವಾಸದಲ್ಲೇ ‘ಗೃಹ ಬಂಧನ'ದಲ್ಲಿರಿಸಿದೆ.

‘ನಾನು ಮತ್ತೆ ಅಕ್ರಮ ಬಂಧನಕ್ಕೊಳಗಾಗಿದ್ದೇನೆ. ಎರಡು ದಿನಗಳಿಂದ ನನ್ನನ್ನು ಪುಲ್ವಾಮಾದ ವಹೀದ್‌ ಅವರ ಕುಟುಂಬದವರ ಭೇಟಿಗೆಜಮ್ಮು ಮತ್ತು ಕಾಶ್ಮೀರ ಆಡಳಿತ ಅವಕಾಶ ನೀಡುತ್ತಿಲ್ಲ. ಇಲ್ಲಿನ ಭದ್ರತಾ ಪಡೆಗಳು, ಬಿಜೆಪಿ ಸಚಿವರು ಮತ್ತು ಅವರ ಕೈಗೊಂಬೆಗಳಾಗಿರುವವರಿಗೆ ಮಾತ್ರ ಓಡಾಡಲು ಅವಕಾಶ ನೀಡುತ್ತವೆ. ಅವರುಗಳಿಂದ ಭದ್ರತಾ ವ್ಯವಸ್ಥೆ ಮೇಲೆ ಏನೂ ತೊಂದರೆಯಾಗುವುದಿಲ್ಲ. ಆದರೆ, ನನ್ನ ವಿಚಾರದಲ್ಲಿ ಮಾತ್ರ ಸಮಸ್ಯೆ ಉಂಟಾಗುತ್ತದೆ’ ಎಂದು ಮುಫ್ತಿ ಅವರು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ಮುಫ್ತಿ ಮತ್ತು ಅವರ ಪುತ್ರಿಯ ಗೃಹಬಂಧನ ಕುರಿತು ಪ್ರತಿಕ್ರಿಯಿಸಿರುವ ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ‘ವೈಯಕ್ತಿಕ ಸ್ವಾತಂತ್ರ್ಯ‘ವನ್ನು ಈ ಸರ್ಕಾರ ತನ್ನ ಇಚ್ಛಾನುಸಾರ ಬಳಸುತ್ತಿದೆ ಎಂದು ದೂರಿದ್ದಾರೆ. ನ್ಯಾಯಾಂಗದ ಮಧ್ಯಪ್ರವೇಶವಿಲ್ಲದೇ, ತನ್ನ ಇಚ್ಛೆ ಬಂದಂತೆ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಬಳಸುತ್ತಿದೆ‘ ಎಂದು ಆರೋಪಿಸಿದ್ದಾರೆ.

ADVERTISEMENT

‘ಇತ್ತೀಚೆಗೆ ಈ ಸರ್ಕಾರ ನನ್ನ ತಂದೆಯವರು ಪ್ರಾರ್ಥನೆ ಮಾಡುವುದನ್ನು ತಡೆಯಲು ಇದೇ ವಿಧಾನವನ್ನು ಅನುಸರಿಸಿತ್ತು‘ ಎಂದು ಆರೋಪಿಸಿದ ಒಮರ್ ಅಬ್ದುಲ್ಲಾ, ‘ವೈಯಕ್ತಿಕ ಸ್ವಾತಂತ್ರ್ಯವನ್ನು ತನ್ನ ಮನಸ್ಸಿಗೆ ಬಂದಂತೆ ಬಳಸುತ್ತಿದೆ‘ ಎಂದು ಟೀಕಿಸಿದ್ದಾರೆ. ಒಮರ್ ತಂದೆ ಫಾರೂಕ್ ಅಬ್ದುಲ್ಲಾ ಅವರನ್ನ ಅ.30ರಂದು ಈದ್‌ ಮಿಲಾದ್‌ ದಿನ ಮಸೀದಿಗೆ ಪ್ರಾರ್ಥನೆಗೆ ಹೋಗದಂತೆ ತಡೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.