ಪುದುಚೇರಿ: ಮೇಕೆದಾಟು ವಿಚಾರವಾಗಿ ಚರ್ಚಿಸಲು ಪುದುಚೇರಿ ಸರ್ಕಾರವು ಶುಕ್ರವಾರ (ಡಿ.14) ವಿಶೇಷ ಅಧಿವೇಶನ ಕರೆದಿದೆ.ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆಗೆ ತಡೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಅನುಮೋದಿಸಲು ಸರ್ಕಾರ ನಿರ್ಧರಿಸಿದೆ.
ವಿಶೇಷ ಅಧಿವೇಶನ ಕರೆಯುವಂತೆ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಪ್ರತ್ಯೇಕವಾಗಿ ಮಾಡಿದ್ದ ಮನವಿಗಳನ್ನು ಪುದುಚೇರಿ ವಿಧಾನಸಭೆ ಸ್ಪೀಕರ್ ವಿ.ವೈದ್ಯಲಿಂಗಂ ಅವರು ಪುರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾವೇರಿ ಜಲಾನಯನ ಪ್ರದೇಶದ ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಿಸುವುದರಿಂದ ಪುದುಚೇರಿ ಸೇರಿದಂತೆನದಿಯ ಕೆಳಭಾಗದ ರಾಜ್ಯಗಳಲ್ಲಿ ನೀರಿನ ಕೊರತೆ ಉಂಟಾಗುತ್ತದೆ ಎಂಬ ಆತಂಕವನ್ನು ಎರಡೂ ಪಕ್ಷಗಳು ವ್ಯಕ್ತಪಡಿಸಿದ್ದವು. ಯೋಜನೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದವು. ತಮಿಳುನಾಡು ಸರ್ಕಾರ ಕೂಡಾ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ.
ಅಣೆಕಟ್ಟು ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ ತಯಾರಿಸುವಂತೆ ಕೇಂದ್ರ ಜಲ ಆಯೋಗವು ಕಳೆದ ತಿಂಗಳು ಕರ್ನಾಟಕ ಸರ್ಕಾರಕ್ಕೆ ಅನುಮತಿ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.