ಚೆನ್ನೈ: ಪುರುಷರು, ಮಹಿಳೆಯರನ್ನು ರಕ್ಷಿಸಲು ತಮ್ಮ ಸಾಮರ್ಥ್ಯವನ್ನು ಬಳಸಬೇಕೇ ವಿನಃ ಅವರನ್ನು ನಿಯಂತ್ರಿಸಲು ಅಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಹೇಳಿದ್ದಾರೆ.
ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಹಿಂಬಾಲಕನೊಬ್ಬ 20 ವರ್ಷದ ಕಾಲೇಜು ಯುವತಿಯನ್ನು ಕೊಂದ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಆ ಘಟನೆ ಬಗ್ಗೆ ಕೇಳಿ ತೀವ್ರ ಆಘಾತವಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಪೋಷಕರು ಎಚ್ಚರವಹಿಸಬೇಕು ಎಂದು ಅವರು ಹೇಳಿದ್ದಾರೆ.
ಪ್ರಾಕೃತಿಕವಾಗಿ ಪುರುಷ ಬಲಿಷ್ಠವಾಗಿರಬಹುದು. ಆದರೆ, ಪುರುಷರು ತಮ್ಮ ಸಾಮರ್ಥ್ಯವನ್ನು ಮಹಿಳೆಯರನ್ನು ರಕ್ಷಿಸಲು ಬಳಸಬೇಕೆ ಹೊರತು ಅವರನ್ನು ನಿಯಂತ್ರಿಸಲು ಅಲ್ಲ. ಮಕ್ಕಳಿಗೆ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತಂತೆ ಪೋಷಕರು ತಿಳಿ ಹೇಳಬೇಕು ಎಂದಿದ್ದಾರೆ.
ಒಂದು ವರ್ಷದಿಂದ ಹಿಂಬಾಲಿಸುತ್ತಿದ್ದ 23 ವರ್ಷದ ಸತೀಶ್ ಎಂಬ ವ್ಯಕ್ತಿ ಸತ್ಯ ಪ್ರಿಯಾ ಎಂಬ ಖಾಸಗಿ ಕಾಲೇಜಿನ ಬಿಕಾಂ ವಿದ್ಯಾರ್ಥಿನಿಯನ್ನು ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿ ಕೊಲೆ ಮಾಡಿದ್ದ. ಸೆಪ್ಟೆಂಬರ್ 13ರಂದು ಘಟನೆ ನಡೆದಿತ್ತು. ಇದಾದ ಒಂದು ದಿನದ ಬಳಿಕ, ಮಗಳ ಸಾವಿನ ದುಃಖ ಭರಿಸಲಾಗದೆ ಅವರ ತಂದೆ ಮಾಣಿಕ್ಯಂ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರತಿಯೊಬ್ಬರಿಗೂ ಸತ್ಯ ಪ್ರಿಯಾ ಘಟನೆ ಬಗ್ಗೆ ತಿಳಿದಿದೆ. ಅದರಿಂದ ನಿಮ್ಮಂತೆಯೇ ನನಗೂ ಆಘಾತವಾಗಿದೆ. ನಾವು ನಿರೀಕ್ಷಿಸಿದ ಸಮಾಜ ಇದಲ್ಲ. ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಎಚ್ಚರವಹಿಸಲು ಸಮಾಜದ ಎಲ್ಲ ಜನರು ಮುಂದೆ ಬರಬೇಕು. ಮಕ್ಕಳಿಗೆ ಪೋಷಕರು ಸೂಕ್ತ ಶಿಕ್ಷಣ ಕೊಡಬೇಕು ಎಂದಿದ್ದಾರೆ.
ಮಕ್ಕಳು ತಪ್ಪುದಾರಿಗೆ ಹೋಗದಂತೆ ನೋಡಿಕೊಳ್ಳುವ ಪ್ರಥಮ ಜವಾಬ್ದಾರಿ ಪೋಷಕರದ್ದಾಗಿದೆ ಎಂದು ಸ್ಟ್ಯಾಲಿನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.