ADVERTISEMENT

ಹಿಂದುತ್ವದ ವಿಚಾರದಲ್ಲಿ ಗೊಂದಲಕ್ಕೀಡಾದ ಶಿವಸೇನೆ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 17:15 IST
Last Updated 30 ನವೆಂಬರ್ 2020, 17:15 IST
   

ಮುಂಬೈ: ಶಿವಸೇನೆಯ ದಕ್ಷಿಣ ಮುಂಬೈ ವಲಯ ಮುಖ್ಯಸ್ಥ ಪಾಂಡುರಂಗ ಸಕ್ಪಾಲ್ ಅವರು ಭಗವತ್‌ ಗೀತಾ ಪಠಣ ಸ್ಪರ್ಧೆಯ ಮಾದರಿಯಲ್ಲಿ ಅಜಾನ್ ಪಠಣ ಸ್ಪರ್ಧೆಯನ್ನು ನಡೆಸುವ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಸೇನೆಯು ಮುಸ್ಲಿಮರನ್ನು ಓಲೈಸಲು ನಡೆಯುತ್ತಿರುವ ಪ್ರಯತ್ನವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ತನ್ನ ಈ ಹಿಂದಿನ ಮಿತ್ರಪಕ್ಷವಾಗಿರುವ ಶಿವಸೇನೆಯು ಅದರ ಸ್ಥಾಪಕ ಬಾಳಾ ಠಾಕ್ರೆ ಪ್ರತಿಪಾದಿಸಿದ ಹಿಂದುತ್ವ ಸಿದ್ಧಾಂತವನ್ನು ಮತ ಗಳಿಸುವ ಉದ್ದೇಶದಿಂದ ಬಿಟ್ಟುಕೊಟ್ಟಿದೆ ಎಂದು ಬಿಜೆಪಿ ಕಿಡಿಕಾರಿದೆ.

ವಿರೋಧ ಪಕ್ಷದ ನಾಯಕರೂ ಆಗಿರುವ ಬಿಜೆಪಿಯ ಪರ್ವೀನ್‌ ದಾರೇಕರ್‌ ಅವರು, ‘ಸಕ್ಪಾಲ್‌ ಅವರು ಮುಸ್ಲಿಮರನ್ನು ಓಲೈಸುವ ಪ್ರಯತ್ನದಲ್ಲಿ ಬಾಳಾಸಾಹೇಬ್‌ ಠಾಕ್ರೆಯವರ ಸಿದ್ಧಾಂತವನ್ನು ಬಿಟ್ಟುಕೊಟ್ಟಿದ್ದಾರೆ. ಬಾಳಾಸಾಹೇಬರು ಮಸೀದಿಗಳಲ್ಲಿ ನಮಾಜ್ ಕೂಗುವ ಸಲುವಾಗಿ ಧ್ವನಿವರ್ದಕ‌ಗಳನ್ನು ಬಳಸುವುದನ್ನು ವಿರೋಧಿಸುತ್ತಿದ್ದರು. ಇಂದು ಪಕ್ಷವು ವೋಟ್‌ ಬ್ಯಾಂಕ್‌ ಸಲುವಾಗಿ ಹಿಂದುತ್ವದ ವಿಚಾರದಲ್ಲಿ ಗೊಂದಲಕ್ಕೀಡಾಗಿದೆ. ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿಪಕ್ಷದ ಮೂಲಭೂತ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿರುವ ಸಕ್ಪಾಲ್‌ ಅವರು, ಸೇನೆಯ ನಾಯಕ ಸಂಜಯ್ ರಾವುತ್‌ ಅವರ ಆಪ್ತ ಎನ್ನಲಾಗಿದೆ’ ಎಂದು ಎಂದಿದ್ದಾರೆ.

ADVERTISEMENT

ದಕ್ಷಿಣ ಮುಂಬೈನಲ್ಲಿ ಶಾಲೆಗೆ ತೆರಳುವ ಮಕ್ಕಳಿಗಾಗಿ ಆಜಾನ್‌ ಪಠಣ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ಧಾರ್ಮಿಕ ಪವಿತ್ರ ಆಜಾನ್‌ ಪಠಣ ಮಾಡುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಇದರ ಹಿಂದಿನ ಉದ್ದೇಶ ಎಂದು ಸಕ್ಪಾಲ್‌ ಹೇಳಿದ್ದರು. ಜೊತೆಗೆ, ಆಜಾನ್‌ ಪಠಣದ ಶಬ್ದವು ಸುಮಧುರವಾಗಿದ್ದು, ತಾವು ಆ ಬಗ್ಗೆ ಯಾವಾಗಲೂ ಕೌತುಕರಾಗಿರುವುದಾಗಿಯೂ ತಿಳಿಸಿದ್ದರು.

‘ಈ ಸಮುದಾಯದ ಸಾಕಷ್ಟು ಮಕ್ಕಳು ಕೌಶಲ್ಯಭರಿತವಾಗಿ ಆಜಾನ್‌ ಕೂಗುತ್ತಾರೆ. ಇದು ಈ ರೀತಿಯ ಮೊದಲ ಪ್ರಯತ್ನವಾಗಿರಬಹುದು. ಇದು (ಆಜಾನ್‌ ಪಠಣ) ಮುಸ್ಲಿಂ ಸಮುದಾಯದ ತುಂಬಾ ಹಳೆಯ ಸಂಪ್ರದಾಯವಾಗಿದೆ. ಇದನ್ನು ಯಾರೂ ವಿರೋಧಿಸಬಾರದು’ ಎಂದು ಹೇಳಿದ್ದರು.

ಸೇನೆಯವ ವತಿಯಿಂದ ಆಜಾನ್‌ ಪಠಣ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮೌಲ್ವಿಗಳು ತೀರ್ಪುಗಾರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.