ADVERTISEMENT

‘ಮಾನನಷ್ಟ ಮೊಕದ್ದಮೆ: ವಿವಾದದ ಪರಿಹಾರ ಸಾಧ್ಯವೇ’

ಪಿಟಿಐ
Published 21 ನವೆಂಬರ್ 2020, 14:15 IST
Last Updated 21 ನವೆಂಬರ್ 2020, 14:15 IST
ಎಂ.ಜೆ.ಅಕ್ಬರ್‌
ಎಂ.ಜೆ.ಅಕ್ಬರ್‌   

ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ಅವರ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ಅವರು ದಾಖಲಿಸಿರುವ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಇಲ್ಲಿನ ನ್ಯಾಯಾಲಯವೊಂದು, ಪರಸ್ಪರ ಒಪ್ಪಂದದಿಂದ ವಿವಾದದ ಪರಿಹಾರಕ್ಕೆ ಸಾಧ್ಯತೆ ಇದೆಯೇ ಎಂದು ಅಕ್ಬರ್‌ ಅವರನ್ನು ಕೇಳಿದೆ.

ದೇಶದಲ್ಲಿ 2018ರಲ್ಲಿ ‘ಮೀಟೂ’ ಅಭಿಯಾನ ಆರಂಭವಾಗಿದ್ದ ಸಂದರ್ಭದಲ್ಲಿ ಅಕ್ಬರ್‌ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ರಮಣಿ ಅವರು ಮಾಡಿದ್ದರು. ಈ ಆರೋಪಕ್ಕೆ ಪ್ರತಿಯಾಗಿ ರಮಣಿ ಅವರ ವಿರುದ್ಧ 2018 ಅ.15ರಂದು ಮಾನನಷ್ಟ ಮೊಕದ್ದಮೆಯನ್ನು ಅಕ್ಬರ್‌ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ರವೀಂದ್ರ ಕುಮಾರ್‌ ಅವರು, ವ್ಯಾಜ್ಯ ಅಂತ್ಯಗೊಳಿಸಲು ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಕ್ಬರ್‌ ಅವರ ಪರ ವಕೀಲರಾದ ಗೀತಾ ಲುಥ್ರಾ, ಈ ವಿಷಯದ ಕುರಿತಾಗಿ ಅಂತಿಮ ತೀರ್ಮಾನ ಕೈಗೊಳ್ಳುವ ಮೊದಲು ತನ್ನ ಕಕ್ಷಿದಾರರ ಜೊತೆ ಮಾತನಾಡಬೇಕು ಎಂದು ಹೇಳಿದರು. ‘ಪ್ರಕರಣದ ಪರಿಹಾರದ ಕುರಿತು ಎರಡೂ ಕಡೆಯವರು ನ.24ಕ್ಕೆ ಪ್ರತಿಕ್ರಿಯೆಯನ್ನು ನೀಡಬೇಕು’ ಎಂದು ಸೂಚಿಸಿ ವಿಚಾರಣೆಯನ್ನು ನ.24ಕ್ಕೆ ಮುಂದೂಡಿದರು.

ADVERTISEMENT

ಪತ್ರಕರ್ತರಾಗಿ ಅಕ್ಬರ್‌ ಅವರ ಜೊತೆ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 20ಕ್ಕೂ ಅಧಿಕ ಮಹಿಳೆಯರು ಅವರ ವಿರುದ್ಧ ಆರೋಪ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.