ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನ್ವಯ ನಿಯಮಗಳನ್ನು ರೂಪಿಸಲು ಗೃಹ ಸಚಿವಾಲಯವು ಹೆಚ್ಚುವರಿ ಮೂರು ತಿಂಗಳು ಕಾಲಾವಕಾಶ ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಇಲಾಖೆಯ ಸ್ಥಾಯಿ ಸಮಿತಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ನಿಯಮದ ಅನುಸಾರ, ರಾಷ್ಟ್ರಪತಿ ಅವರ ಅಂಕಿತ ದೊರೆತ ನಂತರದ ಆರು ತಿಂಗಳ ಅವಧಿಯಲ್ಲಿ ನಿಯಮಗಳನ್ನು ರೂಪಿಸಬೇಕು.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ದೌರ್ಜನ್ಯಕ್ಕೆಗೊಳಗಾದ ಮುಸ್ಲೀಮರೇತರರಿಗೆ ಭಾರತದ ಪೌರತ್ವ ನೀಡಲು ಅವಕಾಶ ಕಲ್ಪಿಸುವ ಈ ಕಾಯ್ದೆ ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಎಂಟು ತಿಂಗಳ ಹಿಂದೆ ಸಂಸತ್ತು ಮಸೂದೆಗೆ ಅನುಮೋದನೆ ನೀಡಿದ್ದು, ಡಿಸೆಂಬರ್ 12, 2019ರಂದು ರಾಷ್ಟ್ರಪತಿ ಅಂಕಿತ ಹಾಕಿದ್ದರು.
ಸ್ಥಾಯಿ ಸಮಿತಿಯು ಸಿಎಎ ಸ್ಥಿತಿ ಕುರಿತು ಮಾಹಿತಿ ಬಯಸಿದ ಹಿಂದೆಯೇ ಗೃಹ ಸಚಿವಾಲಯವು ಹೆಚ್ಚುವರಿ ಅವಧಿ ಕೋರಿ ಮನವಿ ಸಲ್ಲಿಸಿದೆ. ಸ್ಥಾಯಿ ಸಮಿತಿಯು ಈ ಮನವಿಯನ್ನು ಒಪ್ಪುವ ಸಾಧ್ಯತೆಗಳಿವೆ ಎಂದು ಅಧಿಕಾರಿಯು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.