ಕೋಲ್ಕತ್ತ: ಹಾರಾಟ ಸಮಯದಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ಜೈಪುರ–ಕೋಲ್ಕತ್ತ ಮಾರ್ಗದ ಇಂಡಿಗೊ ವಿಮಾನವು ಕೋಲ್ಕತ್ತದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಸೋಮವಾರ ನಡೆದಿದೆ. ವಿಮಾನದಲ್ಲಿದ್ದ 136 ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ ಎಂದು ಡಿಜಿಸಿಎ ಅಧಿಕಾರಿ ತಿಳಿಸಿದ್ದಾರೆ.
ಕೋಲ್ಕತ್ತದಿಂದ ಸುಮಾರು 45 ಮೈಲು ದೂರದಲ್ಲಿದ್ದಾಗ ವಿಮಾನದ ಪೈಲಟ್ ಸಹಾಯಕ್ಕಾಗಿ ತುರ್ತು ಸಂದೇಶ (ಮೇ ಡೇ: ಮಾರಣಾಂತಿಕ ತುರ್ತುಸ್ಥಿತಿ) ಕಳಹಿಸಿದ ಕಾರಣ ಕೋಲ್ಕತ್ತದಲ್ಲಿ ವಿಮಾನ ಇಳಿಸಲು ಅವಕಾಶ ನೀಡಲಾಯಿತು. ಪ್ರಕರಣದ ತನಿಖೆಗೆ ಸರ್ಕಾರ ಆದೇಶ ನೀಡಿದೆ.
ವಿಮಾನದದಲ್ಲಿ ಈ ಮೊದಲು ಯಾವುದೇ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರಲಿಲ್ಲ. ಕ್ಯಾಬಿನ್ನಲ್ಲಿ ಹೊಗೆ ಕಾಣಿಸಿಕೊಂಡ ಶಂಕೆ ಮೇಲೆ ಮುಂಜಾಗರೂಕತೆ ಕ್ರಮವಾಗಿ ಭೂಸ್ಪರ್ಶ ಮಾಡಿಸಲಾಯಿತು ಎಂದು ಡಿಜಿಸಿಎ ತಿಳಿಸಿದೆ.
ಕಡಿಮೆ ವೆಚ್ಚದ ವಿಮಾನಯಾನ ಸೇವೆ ಒದಗಿಸುತ್ತಿರುವ ಇಂಡಿಗೊ ಹಾಗೂ ಗೋ ಏರ್ ಸಂಸ್ಥೆಗಳ ವಿಮಾನಗಳಲ್ಲಿ ಪ್ರಾಟ್ ಅಂಡ್ ವಿಟ್ನಿ ಎಂಜಿನ್ ಬಳಸಲಾಗುತ್ತಿದೆ. ಬಳಕೆ ಶುರುವಾದಾಗಿನಿಂದಲೂ ಹಾರಾಟದ ಸಮಯದಲ್ಲಿ ಈ ಎಂಜಿನ್ಗಳು ಗಂಭೀರ ತೊಡಕು ಉಂಟು ಮಾಡುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.