ADVERTISEMENT

ಮುಂಬೈ ದಾಳಿಯ ಸಂಚುಕೋರ: ಉಗ್ರ ಹಫೀಜ್‌ ಬಂಧನ

ಪಿಟಿಐ
Published 17 ಜುಲೈ 2019, 20:00 IST
Last Updated 17 ಜುಲೈ 2019, 20:00 IST
ಹಫೀಜ್‌
ಹಫೀಜ್‌   

ಲಾಹೋರ್‌: ಮುಂಬೈ ದಾಳಿ ಸಂಚುಕೋರ ಜಮಾತ್‌–ಉದ್‌–ದವಾ (ಜೆಯುಡಿ) ಸಂಘಟನೆ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ಬುಧವಾರ ಬಂಧಿಸಲಾಗಿದೆ.

ಭಯೋತ್ಪಾದನಾ ಚಟುವಟಿಕೆಗೆ ಹಣಕಾಸಿನ ನೆರವು ನೀಡಿದ ಆರೋಪಕ್ಕಾಗಿ ಪಂಜಾಬ್‌ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ ಈ ಕ್ರಮ ಕೈಗೊಂಡಿದೆ. ಲಾಹೋರ್‌ನಿಂದ ಗುಜ್ರ್‌ನ್ವಾಲಾಗೆ ತೆರಳುತ್ತಿದ್ದಾಗ ಹಫೀಜ್‌ನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜ್ರ್‌ನ್ವಾಲಾ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಹಫೀಜ್‌ನನ್ನು ಹಾಜರುಪಡಿಸಲಾಯಿತು. ನ್ಯಾಯಾಲಯ ಹಫೀಜ್‌ನನ್ನು ನ್ಯಾಯಾಂಗ ವಶಕ್ಕೆ ನೀಡಿದ ಬಳಿಕ ಬಿಗಿ ಭದ್ರತೆಯಲ್ಲಿ ಲಾಹೋರ್‌ನ ಕೋಟ್‌ ಲಖ್ಪತ್‌ ಜೈಲಿಗೆ ಕರೆದೊಯ್ಯಲಾಯಿತು. ಇದೇ ಜೈಲಿನಲ್ಲಿ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ವರ್ಷ ಶಿಕ್ಷೆ ಅನುಭವಿಸುತ್ತಿದ್ದಾರೆ.

ADVERTISEMENT

ಹಫೀಜ್‌ ಸಯೀದ್‌ ಸೇರಿದಂತೆ 13 ಜೆಯುಡಿ ನಾಯಕರ ವಿರುದ್ಧ 23 ಆರೋಪಪಟ್ಟಿಗಳನ್ನು ಭಯೋತ್ಪಾದನಾ ನಿಗ್ರಹ ಇಲಾಖೆ ದಾಖಲಿಸಿದೆ.

ಅಂತರರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಮಣಿದ ಪಾಕಿಸ್ತಾನ, ಜೆಯುಡಿ ಮತ್ತು ಲಷ್ಕರ್‌–ಎ–ತಯಬಾ ಹಾಗೂ ಫಲಾಹ್‌–ಇ–ಇನ್ಸಾನಿಯತ್‌ ಫೌಂಡೇಷನ್‌ (ಎಫ್‌ಐಎಫ್‌) ಚಟುವಟಿಕೆಗಳ ಬಗ್ಗೆ ತನಿಖೆ ಕೈಗೊಂಡಿದೆ.

ಈ ಸಂಘಟನೆಗಳು ಟ್ರಸ್ಟ್‌ಗಳ ಮೂಲಕ ಸಂಗ್ರಹಿಸುವ ಹಣವನ್ನು ಭಯೋತ್ಪಾದನಾ ಚಟುವಟಿಕೆಗೆ ಬಳಸುತ್ತಿವೆ ಎನ್ನುವ ಆರೋಪದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಲಾಹೋರ್‌, ಗುಜ್ರ್‌ನ್ವಾಲಾಮತ್ತು ಮುಲ್ತಾನ್‌ನಲ್ಲಿ ಈ ಬಗ್ಗೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪುಲ್ವಾಮಾ ದಾಳಿ ಬಳಿಕ ಅಂತರರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಮಣಿದುಜೆಯುಡಿ ಮತ್ತು ಎಫ್‌ಐಎಫ್‌ ಆಸ್ತಿಗಳನ್ನು ಪಾಕಿಸ್ತಾನ ಸರ್ಕಾರ ಈಗಾಗಲೇ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಲಾಹೋರ್‌ನಲ್ಲಿನ ಜೆಯುಡಿ ಪ್ರಧಾನ ಕಚೇರಿ ಪ್ರವೇಶಿಸಲು ಸಹ ಸಯೀದ್‌ಗೆ ಅವಕಾಶ ನಿರಾಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.