ADVERTISEMENT

ಸಚಿವ ಸಿ.ಪಿ.‌ ಯೋಗೇಶ್ವರ, ಸಿ.ಟಿ.‌ ರವಿ ದೆಹಲಿ‌ಗೆ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 5:50 IST
Last Updated 26 ಜೂನ್ 2021, 5:50 IST
ಸಚಿವ ಸಿ.ಪಿ.‌ ಯೋಗೇಶ್ವರ
ಸಚಿವ ಸಿ.ಪಿ.‌ ಯೋಗೇಶ್ವರ    

ನವದೆಹಲಿ: 'ಮುಖ್ಯಮಂತ್ರಿ ಬದಲಾವಣೆ‌ಗೆ ಸಂಬಂಧಿಸಿದ ಪರೀಕ್ಷೆ ಬರೆದಿದ್ದು, ಶೀಘ್ರವೇ ಫಲಿತಾಂಶ ಹೊರಬೀಳಲಿದೆ' ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವ ಸಿ.ಪಿ.‌ ಯೋಗೇಶ್ವರ ದೆಹಲಿಗೆ ದೌಡಾಯಿಸಿದ್ದಾರೆ.

ಶುಕ್ರವಾರ ತಡರಾತ್ರಿ ಇಲ್ಲಿಗೆ ಬಂದಿರುವ ಅವರು, ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡದೆ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ.

ನಾಯಕತ್ವ ಬದಲಾವಣೆ‌ ಕುರಿತು ಒತ್ತಡ‌ ಹೇರುವ ನಿಟ್ಟಿನಲ್ಲಿ ಅವರು ಕೆಲವು ಮುಖಂಡರನ್ನು ಭೇಟಿ ಮಾಡುವ ಸಾಧ್ಯತೆ‌ ಇದೆ ಎಂದು ತಿಳಿದುಬಂದಿದೆ.

ADVERTISEMENT

ಪಕ್ಷದ‌ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಅವರೂ ಇದೇ ವೇಳೆ ದೆಹಲಿಗೆ ಬಂದಿದ್ದು, ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಬಂದಿದ್ದಾಗಿ ತಿಳಿಸಿದ್ದಾರೆ.

'ಯೋಗೇಶ್ವರ ಅವರು ಬಂದಿರುವ ಬಗ್ಗೆ ಮಾಹಿತಿ ಇಲ್ಲ‌ ಎಂದು ಸ್ಪಷ್ಡಪಡಿಸಿರುವ‌ ಅವರು, ಪಕ್ಷ ಸಂಘಟನೆ‌ ಕುರಿತು ವರಿಷ್ಠರು ಹಮ್ಮಿಕೊಂಡಿರುವ ಸಭೆಯಲ್ಲಿ ಬಾಗವಹಿಸುವೆ' ಎಂದು ಹೇಳಿದ್ದಾರೆ.

'ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದೇನೆ' ಎಂಬ ಸಚಿವ ಸಿ.ಪಿ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ‌ ಅವರು, 'ಪರೀಕ್ಷೆ ಬರೆದವರ ಬಳಿಯೇ ಫಲಿತಾಂಶ ಏನಾಯಿತು ಎಂದು ಕೇಳಬೇಕು. ಅವರು ಯಾವ ಹಿನ್ನಲೆಯಲ್ಲಿ ಆ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಯೋಗೇಶ್ವರ್ ಜತೆ ಬಂದಿಲ್ಲ' ಎಂದು ರವಿ ತಿಳಿಸಿದ್ದಾರೆ‌.

'ಕೇಂದ್ರದ ಸಚಿವ ಸಂಪುಟ ಪುನರ್ ರಚನೆ ಸಾಧ್ಯತೆ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡುವ ಜವಾಬ್ದಾರಿ ನನಗಿಲ್ಲ. ಪ್ರಧಾನಿ ಮೋದಿ ಅವರು ರಾಷ್ಟ್ರದ ಅಭ್ಯುದಯದ‌ ಹಿನ್ನೆಲೆಯಲ್ಲಿ, ವಿಶಾಲ‌ ಮನೋಭಾವದೊಂದಿಗೆ ಸಂಪುಟ‌ ಪುನರ್ ರಚಿಸಲಿದ್ದಾರೆ' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.