ಬಹರಾಯಿಚ್(ಉತ್ತರ ಪ್ರದೇಶ): ಧೋಬಿಯಾನ್ಪುರ ಗ್ರಾಮದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಮಂಗಳವಾರ ಚಿರತೆ ದಾಳಿ ನಡೆಸಿದ್ದು, ಆಕೆ ಮೃತಪಟ್ಟಿದ್ದಾಳೆ.
ಕತಾರ್ನಿಆಘಟ್ ವನ್ಯಜೀವಿ ಅಭಯಾರಣ್ಯ ಸಮೀಪದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಬಾಲಕಿಯು ಮನೆಯ ಹೊರಗಡೆ ಇದ್ದಾಗ ಚಿರತೆ ದಾಳಿ ನಡೆಸಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಜಿ.ಪಿ. ಸಿಂಗ್ ಹೇಳಿದ್ದಾರೆ.
ಬಾಲಕಿಯನ್ನು ಅರಣ್ಯದೊಳಗೆ ಹೊತ್ತೊಯ್ಯಲು ಚಿರತೆ ಅಣಿಯಾಗಿತ್ತು. ಅಷ್ಟೊತ್ತಿಗೆ ಗ್ರಾಮಸ್ಥರು ಕಿರುಚಾಡಿದ್ದರಿಂದ ಬಾಲಕಿಯನ್ನು ಅಲ್ಲೇ ಬಿಟ್ಟು ಚಿರತೆ ಪರಾರಿಯಾಯಿತು ಎಂದು ಅವರು ತಿಳಿಸಿದ್ದಾರೆ.
ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸಂಜೆಯ ಹೊತ್ತು ಮನೆಯಿಂದ ಹೊರಗೆ ಹೋಗದಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಜೂನ್ 4ರಂದು ದಲ್ಲಪುರ್ವ ಎಂಬ ಗ್ರಾಮದಲ್ಲಿ ಮೂರು ವರ್ಷದ ಬಾಲಕಿಯನ್ನು ಕೊಂದಿದ್ದ ಚಿರತೆ, ಪೊಲೀಸರು, ಅರಣ್ಯ ಸಿಬ್ಬಂದಿ ಸೇರಿ ಏಳು ಜನರನ್ನು ಗಾಯಗೊಳಿಸಿತ್ತು. ಇದಾದ ಬಳಿಕ ಅರಣ್ಯ ಇಲಾಖೆಯು ಚಿರತೆಯನ್ನು ಸೆರೆ ಹಿಡಿದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.