ADVERTISEMENT

ಗುರುಗ್ರಾಮ: ಮಸೀದಿಗೆ 200 ಜನರ ಗುಂಪಿನಿಂದ ದಾಳಿ- ಹಲ್ಲೆ, ಉಚ್ಛಾಟನೆಯ ಬೆದರಿಕೆ

ಪಿಟಿಐ
Published 13 ಅಕ್ಟೋಬರ್ 2022, 15:52 IST
Last Updated 13 ಅಕ್ಟೋಬರ್ 2022, 15:52 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ಗುರುಗ್ರಾಮ: 200ಕ್ಕೂ ಅಧಿಕ ಜನರಿದ್ದ ಗುಂಪೊಂದು ಹರಿಯಾಣದ ಹಳ್ಳಿಯ ಮಸೀದಿಯೊಂದಕ್ಕೆ ನುಗ್ಗಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ, ಗ್ರಾಮದಿಂದ ಉಚ್ಛಾಟನೆ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಭೋರ ಕಾಳನ್ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ ಸಂಜೆವರೆಗೆ ಪ್ರಕರಣ ಸಂಬಂಧ ಯಾವುದೇ ಬಂಧನವಾಗಿರಲಿಲ್ಲ.

ಸುಬೇದಾರ್ ನಜರ್ ಮೊಹಮ್ಮದ್ ನೀಡಿದ ದೂರಿನ ಪ್ರಕಾರ, ಭೋರ ಕಾಳನ್ ಗ್ರಾಮದಲ್ಲಿ ಕೇವಲ ನಾಲ್ಕು ಮುಸ್ಲಿಂ ಕುಟುಂಬಗಳಿವೆ. ಬುಧವಾರ ಬೆಳಿಗ್ಗೆ ರಾಜೇಶ್ ಚೌಹಾಣ್ ಅಲಿಯಾಸ್ ಬಾಬು, ಅನಿಲ್ ಭಡೋರಿಯಾ ಮತ್ತು ಸಂಜಯ್ ವ್ಯಾಸ್ ನೇತೃತ್ವದ ಸುಮಾರು 200 ಜನರನ್ನು ಒಳಗೊಂಡ ಗುಂಪು ಮಸೀದಿಯನ್ನು ಸುತ್ತುವರೆದು ಪ್ರಾರ್ಥನಾ ಸ್ಥಳಕ್ಕೆ ಪ್ರವೇಶಿಸಿದಾಗ ಗಲಾಟೆ ಪ್ರಾರಂಭವಾಯಿತು ಎಂದು ಅವರು ಹೇಳಿದ್ದಾರೆ.

ADVERTISEMENT

ರಾತ್ರಿ ಮತ್ತೆ ಮಸೀದಿಯ ಪ್ರಾರ್ಥನಾ ಸ್ಥಳಕ್ಕೆ ನುಗ್ಗಿದ ಗುಂಪು ನಮಾಜ್ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ್ದು, ಕೊಲ್ಲುವುದಾಗಿ ಬೆದರಿಕೆ ಹಾಕಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ.

ಘಟನಾ ಸ್ಥಳದಲ್ಲಿ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯ ಮೊಬೈಲ್ ಫೋನ್ ಪತ್ತೆಯಾಗಿದೆ.

ಮೊಹಮ್ಮದ್ ದೂರಿನ ಆಧಾರದ ಮೇಲೆ ರಾಜೇಶ್ ಚೌಹಾಣ್, ಅನಿಲ್ ಭಡೋರಿಯಾ ಮತ್ತು ಸಂಜಯ್ ವ್ಯಾಸ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಗಲಭೆ, ಧಾರ್ಮಿಕ ಕೇಂದ್ರದಲ್ಲಿ ದಾಂಧಲೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿ ಬಿಲಾಸ್‌ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಸತ್ಯಾಸತ್ಯತೆ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ‘ಎಂದು ಎಎಸ್‌ಐ ಗಜೇಂದ್ರ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.