ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಜೆಡಿಯು ಮುಖ್ಯಸ್ಥ ಹಾಗೂಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಅವರ ಸಮ್ಮುಖದಲ್ಲಿ ಏಪ್ರಿಲ್ 26ರಂದು ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಯ ಹಿಂದಿನ ದಿನ ಏಪ್ರಿಲ್ 25ರಂದು ವಾರಣಾಸಿಯಲ್ಲಿ ಬೃಹತ್ ರೋಡ್ ಶೋ ನಡೆಸಲು ಉದ್ದೇಶಿಸಲಾಗಿದೆ. ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಪ್ರತಿಮೆಯ ಬಳಿ ಆರಂಭವಾಗುವ ರ್ಯಾಲಿಯು ದಶಾಶ್ವಮೇದ್ ಘಾಟ್ ಬಳಿ ಮುಕ್ತಾಯವಾಗಲಿದೆ ಎಂದು ಪಕ್ಷ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
‘ರೋಡ್ ಶೋ ನಂತರ ಪ್ರಧಾನಿ ಮೋದಿ ಅವರು ದಶಾಶ್ವಮೇದ್ನಲ್ಲಿ ಗಂಗಾ ಪೂಜೆ ನೆರವೇರಿಸಲಿದ್ದಾರೆ. ಅದಾದ ಬಳಿಕ ರಾತ್ರಿ 8ಕ್ಕೆ ಹೋಟೆಲ್ ದಿ ಪ್ಯಾರಿಸ್ನಲ್ಲಿ ವಾರಣಾಸಿಯ ಕೆಲ ಪ್ರಮುಖ ವ್ಯಕ್ತಿಗಳೊಂದಿಗೆ ಚರ್ಚಿಸಲಿದ್ದಾರೆ’ ಎಂದು ಅದರಲ್ಲಿ ಉಲ್ಲೇಖಿಸಿದೆ.
ಪ್ರಧಾನಿ ಅವರ ಎರಡೂ ದಿನಗಳ(ಏ.24 ಮತ್ತು ಏ.25) ಕಾರ್ಯಕ್ರಮ ಪಟ್ಟಿಯನ್ನೂ ಪಕ್ಷ ಬಿಡುಗಡೆ ಮಾಡಿದೆ. ‘ನಾಮಪತ್ರ ಸಲ್ಲಿಸುವ ದಿನ(ಶುಕ್ರವಾರ) ಬೆಳಗ್ಗೆ 9.30ಕ್ಕೆ ಬೂತ್ ಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ಬಳಿಕ 11ಗಂಟೆ ಸುಮಾರಿಗೆ ನಗರದಲ್ಲಿರುವ ಕಾಲ ಭೈರವ ದೇವಾಲಯಕ್ಕೆಪ್ರಧಾನಿ ಭೇಟಿ ನೀಡಲಿದ್ದಾರೆ. ನಂತರ 11.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ’
‘ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿಅಕಾಲಿದಳದ ಹಿರಿಯ ನಾಯಕ ಹಾಗೂ ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್,ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್,ಶಿವಸೇನಾ ನಾಯಕ ಉದ್ಧವ್ ಠಾಕ್ರೆ, ಕೇಂದ್ರ ಸಚಿವ ಹಾಗೂಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರು ಉಪಸ್ಥಿತರಿರಲಿದ್ದಾರೆ. ಎಐಎಡಿಎಂಕೆ ನಾಯಕರು ಸೇರಿದಂತೆ ಎನ್ಡಿಎ ಮೈತ್ರಿಕೂಟದಲ್ಲಿರುವ ಮುಖಂಡರು ಮೋದಿ ಜೊತೆ ಕಾಣಿಸಿಕೊಳ್ಳಲಿದ್ದಾರೆ’ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.