ಅಮಿತ್ ಶಾ
– ಪಿಟಿಐ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಿಂದ ಎಲ್ಲ ರೀತಿಯ ಮಾದಕ ದ್ರವ್ಯವನ್ನು ತೊಲಗಿಸಲು ಕಟಿಬದ್ಧವಾಗಿದ್ದು, ಈ ಗುರಿ ಸಾಧನೆಗೆ ಎಲ್ಲ ಪ್ರಯತ್ನ ನಡೆಸುತ್ತಿರುವುದಾಗಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಯ(ಎಎನ್ಟಿಎಫ್) ಮುಖ್ಯಸ್ಥರ ಎರಡನೇ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಾಚರಣೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಯಶಸ್ಸು ಪಡೆಯಲು ಮಾದಕ ವಸ್ತುಗಳ ಪಿಡುಗಿನ ವಿರುದ್ಧದ ಕ್ರಮವನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಮಾದಕ ವಸ್ತುಗಳ ನಿಯಂತ್ರಣ ಬ್ಯೂರೊ(ಎನ್ಸಿಬಿ) ಆಯೋಜಿಸಿರುವ ಈ ಸಮ್ಮೇಳನ ಇಂದಿನಿಂದ ಆರಂಭವಾಗಿದೆ.
2047ರ ಹೊತ್ತಿಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ಮತ್ತು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ ಎಂದು ಗೃಹ ಸಚಿವರು ಹೇಳಿದರು. ಪ್ರಧಾನಿ ಮೋದಿ ಅವರ ಈ ಕನಸನ್ನು ನನಸಾಗಿಸಲು, ದೇಶವು ಸಂಪೂರ್ಣವಾಗಿ ಸುರಕ್ಷಿತವಾಗಿರಬೇಕು ಎಂದು ಅವರು ಹೇಳಿದ್ದಾರೆ.
ದೇಶದಿಂದ ಮಾದಕ ವಸ್ತುಗಳ ಪಿಡುಗನ್ನು ನಿರ್ಮೂಲನೆ ಮಾಡಲು ಮೋದಿ ಸರ್ಕಾರ ದೃಢನಿಶ್ಚಯ ಹೊಂದಿದೆ. ಈ ಗುರಿಯನ್ನು ಸಾಧಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಶಾ ಹೇಳಿದರು.
ವಿಶ್ವದ ಕೆಲವು ಭಾಗಗಳಲ್ಲಿ, ಜನರು ರಾಷ್ಟ್ರದ ಅಭಿವೃದ್ಧಿ ಮತ್ತು ಮಾದಕ ದ್ರವ್ಯದ ಸವಾಲಿನ ನಡುವಿನ ಸಂಬಂಧವನ್ನು ನೋಡಿದ್ದಾರೆ. ದುರದೃಷ್ಟವಶಾತ್, ಜಾಗತಿಕವಾಗಿ ಮಾದಕ ದ್ರವ್ಯಗಳನ್ನು ಪೂರೈಸುವ ಎರಡು ಪ್ರದೇಶಗಳು ನಮಗೆ ಬಹಳ ಹತ್ತಿರದಲ್ಲಿವೆ. ಆದ್ದರಿಂದ, ನಾವು ಅದರ ವಿರುದ್ಧ ಬಲವಾಗಿ ಹೋರಾಡುವ ಸಮಯ ಇದು ಎಂದು ಶಾ ತಿಳಿಸಿದ್ದಾರೆ.
ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಯುವ ಪೀಳಿಗೆಯನ್ನು ಮಾದಕ ದ್ರವ್ಯಗಳಿಂದ ರಕ್ಷಿಸುವುದು ಬಹಳ ಮುಖ್ಯ ಎಂದು ಗೃಹ ಸಚಿವರು ಹೇಳಿದ್ದಾರೆ. ಯಾವುದೇ ದೊಡ್ಡ ರಾಜ್ಯದ ಅಡಿಪಾಯ ಅದರ ಯುವ ಪೀಳಿಗೆ ಎಂದು ಶಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.