ADVERTISEMENT

ಜಗನ್‌ಗೆ ಇರಿತ: ನಾಟಕೀಯ ಬೆಳವಣಿಗೆಯ ಹಿಂದೆ ಮೋದಿ ಸರ್ಕಾರ – ಚಂದ್ರಬಾಬು ನಾಯ್ಡು

ಏಜೆನ್ಸೀಸ್
Published 26 ಅಕ್ಟೋಬರ್ 2018, 1:24 IST
Last Updated 26 ಅಕ್ಟೋಬರ್ 2018, 1:24 IST
   

ವಿಶಾಖಪಟ್ಟಣ: ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ಹಾಗೂ ಆಂಧ್ರ ಪ್ರದೇಶ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗನ್‌ಮೋಹನ್‌ ರೆಡ್ಡಿ ಅವರಿಗೆ ಚಾಕುವಿನಿಂದ ಇರಿತ ಪ್ರಕರಣ ಸಂಬಂಧ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ‘ಜಗನ್‌ ರೆಡ್ಡಿ, ಘಟನೆಗೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಜತೆಗೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಎಲ್ಲ ನಾಟಕೀಯ ಬೆಳವಣಿಗೆಯ ಹಿಂದೆ ಮೋದಿ ಸರ್ಕಾರದ ಕೈವಾಡವಿದೆ. ಕೀಳುಮಟ್ಟದ ರಾಜಕೀಯದಿಂದ ನಮ್ಮ ಸರ್ಕಾರಕ್ಕೆ ಬೆದರಿಕೆ ಹಾಕುವ ಪ್ರಯತ್ನ ನಡೆಯುತ್ತಿದೆ.ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳುತ್ತದೆ’ ಎಂದಿದ್ದಾರೆ.

ಜಗನ್‌ಗೆ ವಿಶಾಖಪಟ್ಟಣ ವಿಮಾನನಿಲ್ದಾಣದಲ್ಲಿ ಗುರುವಾರ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದ.

ADVERTISEMENT

ಘಟನೆವಿವರ: ಹೈದರಾಬಾದ್‌ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಜಗನ್, ‌ಗಣ್ಯರ ಲಾಂಜ್‌ನಿಂದ ಹೊರ ಬರುತ್ತಿದ್ದ ವೇಳೆ ಸೆಲ್ಫಿ ತೆಗೆದುಕೊಳ್ಳುವ ನೆಪ ಮಾಡಿಕೊಂಡು ಅವರ ಬಳಿ ಶ್ರೀನಿವಾಸ ಹೋಗಿದ್ದಾನೆ. ಅವರು ಫೋಟೊಗೆಪೋಸ್‌ ನೀಡುವ ಸಂದರ್ಭದಲ್ಲಿ ಅವರ ಎಡ ಭುಜಕ್ಕೆ ಚಾಕುವಿನಿಂದ ಇರಿದಿದ್ದಾನೆ.

ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿನ ರೆಸ್ಟೋರೆಂಟ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುವ ಜೆ. ಶ್ರೀನಿವಾಸ ರಾವ್‌ (30) ಈ ಕೃತ್ಯ ಎಸಗಿದ್ದಾನೆ. ಈ ರೆಸ್ಟೋರೆಂಟ್‌ ಆಡಳಿತಾರೂಢ ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಾಯಕ ಹರ್ಷವರ್ಧನ್‌ ಅವರಿಗೆ ಸೇರಿದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.