ಗೋರಖ್ಪುರ: ಯಾವುದೇ ರೈತ ನಾಯಕರು ಮಾಡಿರುವುದಕ್ಕಿಂತ ಹೆಚ್ಚಿನದನ್ನು ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಮಾಡಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ವಿಪಕ್ಷಗಳು ಪ್ರಜಾಪ್ರಭುತ್ವದ ಬದಲು ಕುಟುಂಬ ರಾಜಕಾರಣದ ಬಗ್ಗೆ ನಂಬಿಕೆ ಹೊಂದಿವೆ ಎಂದು ಅವರು ಟೀಕಿಸಿದ್ದಾರೆ.
ಚಂಪಾ ದೇವಿ ಪಾರ್ಕ್ನಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಪಕ್ಷವನ್ನೂ ಉಲ್ಲೇಖಿಸದೆ, ‘ನಾವು ಸಾಂಸ್ಕೃತಿಕ ರಾಷ್ಟ್ರೀಯತೆ ಮೂಲಕ ಮುಂದುವರಿಯುತ್ತೇವೆ. ಅವರು(ವಿಪಕ್ಷ) ಕುಟುಂಬ ರಾಜಕಾರಣದಲ್ಲಿ ಮುಂದುವರಿಯುತ್ತಿದ್ದಾರೆ. ನಮಗೆ ರಾಷ್ಟ್ರೀಯತೆ ಮುಖ್ಯ ಮತ್ತು ಅವರಿಗೆ ವಂಶಪಾರಂಪರ್ಯ ಮುಖ್ಯ’ ಎಂದು ಟೀಕಿಸಿದ್ದಾರೆ.
ಹಲವು ರೈತ ನಾಯಕರಿದ್ಧಾರೆ. ಆದರೆ, ಅನ್ನದಾತರಿಗಾಗಿ ಯಾರಾದರೂ ಏನನ್ನಾದರೂ ಮಾಡಿದ್ದರೆ ಅದು ಮೋದಿ ಮಾತ್ರ ಎಂದಿದ್ದಾರೆ.
‘ವಿಪಕ್ಷಗಳು ಒಂದೇ ಕುಟುಂಬಕ್ಕೆ ಚಪ್ಪಾಳೆ ಹೊಡೆಯುವ ಗುತ್ತಿಗೆ ತೆಗೆದುಕೊಂಡಿವೆ’ಎಂದು ಟೀಕಿಸಿದ್ದಾರೆ.
‘ಸಬ್ ಕಾ ಸಾಥ್’ಎಂಬ ಘೋಷ ವಾಕ್ಯದ ಮೂಲಕ ಬಿಜೆಪಿ ಮುಂದುವರಿಯುತ್ತಿದ್ದರೆ, ವಿಪಕ್ಷಗಳು ವೋಟ್ಬ್ಯಾಂಕ್ ರಾಜಕಾರಣ, ನಿರ್ದಿಷ್ಟ ಸಮುದಾಯ ಮತ್ತು ಕುಟುಂಬದ ಬಗ್ಗೆ ತಲೆಕೆಡಿಸಿಕೊಂಡು ಕುಳಿತಿವೆ’ ಎಂದು ನಡ್ಡಾ ಟೀಕಿಸಿದ್ಧಾರೆ.
‘ನಾವು ಎಲ್ಲರ ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದೇವೆ. ಅವರು ತಮ್ಮ ಸಹೋದರರು, ಚಿಕ್ಕಪ್ಪನ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಈಗ ಚಿಕ್ಕಪ್ಪನ ಬಗ್ಗೆಯೂ ಯೋಚಿಸುವುದನ್ನು ನಿಲ್ಲಿಸಿದ್ದಾರೆ’ ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ವಿರುದ್ಧಮಾರ್ಮಿಕವಾಗಿ ಹರಿಹಾಯ್ದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.