ತಿರುವನಂತಪುರ: ತ್ರಿಶ್ಶೂರ್ನ ಗುರುವಾಯೂರ್ ಶ್ರೀಕೃಷ್ಣ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಾವರೆ ಹೂವುಗಳಲ್ಲಿ ತುಲಾಭಾರ ಸೇವೆ ನಡೆಸಲಿದ್ದಾರೆ.
ಗುರುಯೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ.ಬಿ. ಮೋಹನದಾಸ್ ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ಮಾಹಿತಿ ನೀಡಿದ್ದಾರೆ.
‘ಮೋದಿ ಅವರ ತುಲಾಭಾರ ಸೇವೆಗಾಗಿ 112 ಕೆ.ಜಿ. ತಾವರೆ ಹೂವುಗಳನ್ನು ತರಿಸಲಾಗುತ್ತಿದೆ. ಶನಿವಾರ ಬೆಳಿಗ್ಗೆ 9 ಗಂಟೆಯಿಂದ 11.30ರ ವೇಳೆಯಲ್ಲಿ ದೇವಸ್ಥಾನಕ್ಕೆ ಮೋದಿ ಭೇಟಿನೀಡಲಿದ್ದಾರೆ. ತಮಿಳುನಾಡಿನ ನಾಗರಕೊಯಿಲ್ನಿಂದ ತಾವರೆಗಳನ್ನು ತರಿಸಲಾಗುತ್ತಿದೆ’ ಎಂದು ಮೋಹನದಾಸ್ ತಿಳಿಸಿದ್ದಾರೆ.
ಮೋದಿ ಅವರು 2008ರಲ್ಲೂ ಈ ದೇವಸ್ಥಾನದಲ್ಲಿ ತಾವರೆ ಹೂವುಗಳಲ್ಲಿ ತುಲಾಭಾರ ಸೇವೆ ಮಾಡಿಸಿದ್ದರು.
ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಕೇರಳಕ್ಕೆ ಭೇಟಿ ನೀಡುತ್ತಿರುವ ಮೋದಿ ಅವರು ತುಲಾಭಾರ ಸೇವೆಯ ನಂತರ ತ್ರಿಶ್ಶೂರ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ವಿಚಾರವಾಗಿ ಮೋದಿ ಕೆಲವು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.