ADVERTISEMENT

ಎಂ.ಜಿ. ರಾಮಚಂದ್ರನ್‌ ಜನ್ಮ ದಿನಾಚರಣೆ ಇಂದು

ಹಿರಿಯ ನಾಯಕನ ಸಾಮಾಜಿಕ ಕಾರ್ಯ ಸ್ಮರಿಸಿದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 8:22 IST
Last Updated 17 ಜನವರಿ 2021, 8:22 IST
ಎಂ.ಜಿ. ರಾಮಚಂದ್ರನ್‌
ಎಂ.ಜಿ. ರಾಮಚಂದ್ರನ್‌    

ನವದೆಹಲಿ: ಎಐಎಡಿಎಂಕೆ ಸಂಸ್ಥಾಪಕ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಜಿ. ರಾಮಚಂದ್ರನ್‌ (ಎಂಜಿಆರ್‌) ಅವರ ಸಾಮಾಜಿಕ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.

ಎಂಜಿಆರ್‌ ಜನ್ಮದಿನಾಚರಣೆಯಾದ ಭಾನುವಾರದಂದು ಈ ಬಗ್ಗೆ ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಬಡತನ ನಿರ್ಮೂಲನೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ಎಂ.ಜಿ. ರಾಮಚಂದ್ರನ್‌ ಕೈಗೊಂಡಿದ್ದ ಪ್ರಯತ್ನಗಳು ಶ್ಲಾಘನೀಯವಾಗಿದ್ದವು ಎಂದು ಸ್ಮರಿಸಿದ್ದಾರೆ.

ADVERTISEMENT

‘ಭಾರತ ರತ್ನ ಎಂಜಿಆರ್‌ ಜನರ ಹೃದಯದಲ್ಲಿ ನೆಲೆಸಿದ್ದರು. ಚಲನಚಿತ್ರ ರಂಗ ಇರಬಹುದು ಅಥವಾ ರಾಜಕೀಯ ಇರಬಹುದು. ಅವರನ್ನು ಎಲ್ಲ ಕ್ಷೇತ್ರದವರು ಗೌರವಿಸುತ್ತಿದ್ದರು’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಎಂಜಿಆರ್‌ ಎಂದೇ ಖ್ಯಾತರಾಗಿದ್ದ ಎಂ.ಜಿ. ರಾಮಚಂದ್ರನ್‌ ಅವರು 1917ರಂದು ಜನಿಸಿದ್ದರು. ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ಆಗಿದ್ದ ಅವರು, ಸಿ.ಎನ್‌. ಅಣ್ಣಾದೊರೈ ನೇತೃತ್ವದ ಡಿಎಂಕೆ ಪಕ್ಷ ಸೇರಿದ್ದರು. ಅಣ್ಣಾದೊರೈ ನಿಧನದ ಬಳಿಕ ಡಿಎಂಕೆ ಅಧ್ಯಕ್ಷರಾಗಿದ್ದ ಎಂ. ಕರುಣಾನಿಧಿ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ತಮ್ಮದೇ ಆದ ಹೊಸ ಪಕ್ಷವನ್ನು 1972ರಲ್ಲಿ ಸ್ಥಾಪಿಸಿದರು.

ಸುಮಾರು 10 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವರು, ಹಲವು ಜನಪ್ರಿಯ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು. ಅದರಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಮಹತ್ವದ್ದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.