ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರ ರದ್ದತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ವಿಶೇಷಾಧಿಕಾರವು ಪ್ರತ್ಯೇಕತಾವಾದ, ಭ್ರಷ್ಟಾಚಾರ ಮತ್ತು ವಂಶಾಡಳಿತಕ್ಕೆ ನೆರವಾಗಿತ್ತು, ಭಯೋತ್ಪಾದನೆ ಹರಡಲು ಪಾಕಿಸ್ತಾನದ ಕೈಯಲ್ಲಿನ ಉಪಕರಣವಾಗಿತ್ತು. ಇವಿಷ್ಟು ಬಿಟ್ಟರೆ, ವಿಶೇಷಾಧಿಕಾರದಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದು ಹೇಳಿದ್ದಾರೆ.
ಸುದ್ದಿವಾಹಿನಿ ಮೂಲಕ ದೇಶವನ್ನು ಉದ್ದೇಶಿಸಿ ಮೋದಿ ಗುರುವಾರ ಮಾತನಾಡಿದರು. ವಿಶೇಷಾಧಿಕಾರ ರದ್ದತಿಯು ಐತಿಹಾಸಿಕ ತೀರ್ಮಾನ ಎಂದ ಅವರು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ನಲ್ಲಿ ಹೊಸ ಯುಗ ಆರಂಭವಾಗಿದೆ ಎಂದರು.
ಶ್ಯಾಮಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಸರ್ದಾರ್ ಪಟೇಲ್ ಮತ್ತು ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ ಎಂದು ಹೇಳಿದರು.
ಇಡೀ ದೇಶಕ್ಕಾಗಿ ಮಾಡಿದ ಕಾನೂನುಗಳ ಪ್ರಯೋಜನಗಳು 370ನೇ ವಿಧಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ 1.5 ಕೋಟಿ ಜನರಿಗೆ ಅನ್ವಯವೇ ಆಗುತ್ತಿರಲಿಲ್ಲ. ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರವು ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಲಿದೆ. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಹಿಡಿತದಿಂದ ಈ ಪ್ರದೇಶವನ್ನು ಬಿಡಿಸುತ್ತೇವೆ ಎಂದು ಹೇಳಿದರು.
***
ಜಮ್ಮು ಮತ್ತು ಕಾಶ್ಮೀರವು ದೀರ್ಘ ಕಾಲ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯದು. ಆದರೆ, ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿಯೇ ಉಳಿಸಿಕೊಳ್ಳಲಾಗುವುದು
ನರೇಂದ್ರ ಮೋದಿ, ಪ್ರಧಾನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.