ADVERTISEMENT

ಪುಲ್ವಾಮಾ ದಾಳಿ ನಂತರವೂ ಫೋಟೊಶೂಟ್‌ನಲ್ಲಿ ಭಾಗಿಯಾಗಿದ್ದರು ಪ್ರಧಾನಿ ಮೋದಿ

ಏಜೆನ್ಸೀಸ್
Published 21 ಫೆಬ್ರುವರಿ 2019, 12:07 IST
Last Updated 21 ಫೆಬ್ರುವರಿ 2019, 12:07 IST
   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಈಚೆಗೆ ನಡೆದ ಉಗ್ರರ ದಾಳಿಗೆ ಸಿಆರ್‌ಪಿಎಫ್‌ನ 40 ಜವಾನರು ಹುತಾತ್ಮರಾದರು. ಈ ದುಃಖದ ವಿಷಯ ತಿಳಿದ ನಂತರವೂಪ್ರಧಾನಿ ನರೇಂದ್ರ ಮೋದಿ ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದರು ಎಂದು ಕಾಂಗ್ರೆಸ್‌ ಆರೋಪಿಸಿದೆ.

ಮೋದಿ ಅವರ ಆದ್ಯತೆ ಬಗ್ಗೆ ಟೀಕಿಸಿರುವ ಕಾಂಗ್ರೆಸ್‌, ‘ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗಿಂತ ಅಧಿಕಾರದ ಮದವೇ ಹೆಚ್ಚಾಗಿದೆ’ ಎಂದುಕುಟುಕಿದೆ.

ಈ ಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದಕಾಂಗ್ರೆಸ್‌ ವಕ್ತಾರ ರಣ್‌ದೀಪ್‌ ಸಿಂಗ್‌ ಸುರ್ಜೇವಾಲ ‘ಈಡೀ ದೇಶವೇ ಜವಾನರ ಸಾವಿನ ದುಃಖದಲ್ಲಿ ಮುಳುಗಿದ್ದರೆ, ಪ್ರಧಾನಿ ಮೋದಿ ಮಾತ್ರ ಉತ್ತರಾಖಂಡದಲ್ಲಿನ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಸಿನಿಮಾವೊಂದರ ಚಿತ್ರೀಕರಣದಲ್ಲಿದ್ದರು. ಆರಾಮವಾಗಿ ದೋಣಿ ವಿಹಾರವನ್ನೂ ನಡೆಸಿದರು’ ಎಂದು ಆರೋಪಿಸಿದರು.

ADVERTISEMENT

‘ಅಂದು ಸಂಜೆ 6.30ರವರೆಗೂ ಚಿತ್ರೀಕರಣ ನಡೆಯಿತು. ನಂತರ 6.45ಕ್ಕೆ ಚಹಾ ಕೂಟದಲ್ಲಿಯೂ ಅವರು ಪಾಲ್ಗೊಂಡಿದ್ದರು. ದಾಳಿ ನಡೆದ ನಂತರ ಸುಮಾರುನಾಲ್ಕು ತಾಸುಮೋದಿ ಅವರು ಫೋಟೊಶೂಟ್‌, ಚಹಾಕೂಟ...ಹೀಗೆ ತಮ್ಮದೇ ಲೋಕದಲ್ಲಿ ಮಗ್ನರಾಗಿದ್ದರು’ ಎಂದು ಹೇಳಿದರು.

‘ಇದಕ್ಕಿಂತ ದುಃಖದ ವಿಷಯವೆಂದರೆ, ಜವಾನರ ಸಾವಿಗೆ ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ಶೋಕಾಚರಣೆ ಎಂದು ಘೋಷಿಸಲೇ ಇಲ್ಲ. ಹಾಗೇನಾದರೂ ಶೋಕಾಚರಣೆ ಪ್ರಕಟಿಸಿದ್ದರೆ, ಮೋದಿ ನೇತೃತ್ವದಲ್ಲಿ ನಡೆಯುತ್ತಿದ್ದ ರಾಜಕೀಯ ರ್‍ಯಾಲಿ ಮತ್ತು ಉದ್ಘಾಟನಾ ಸಮಾರಂಭಗಳು ರದ್ದಾಗುತ್ತಿದ್ದವು. ಝಾನ್ಸಿಯ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಪಾಲ್ಗೊಂಡಿದ್ದ ಕಾರಣ ಘಟನಾ ಸ್ಥಳಕ್ಕೆ ಒಂದು ತಾಸು ತಡವಾಗಿ ಬಂದರು. ಸಾಕಷ್ಟು ವಿರೋಧ ಕೇಳಿಬಂದ ನಂತರವಷ್ಟೇ ಬಿಜೆಪಿ ತನ್ನ ಎಲ್ಲಾ ಸಭೆಗಳನ್ನು ರದ್ದುಗೊಳಿಸಿತು’ ಎಂದು ದೂರಿದರು.

‘ಉಗ್ರರಿಂದ ಪ್ರಾಣ ಕಳೆದುಕೊಂಡ ಸಿಆರ್‌ಪಿಎಫ್‌ ಜವಾನರು, ಯೋಧರ ಕುಟುಂಬದವರಿಗೆ ಸಾಂತ್ವನ ಹೇಳುವುದನ್ನು ಬಿಟ್ಟು ಮೋದಿ ಅವರು ಉತ್ತರ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ’ ಎಂದು ಟೀಕಿಸಿದರು.

ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಕ್ಕೆ, ಕಾಂಗ್ರೆಸ್‌ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದೆ.

* ಬಿಗಿ ಭದ್ರತೆ ಇರುವ ರಾಷ್ಟ್ರೀಯ ಹೆದ್ದರಿಯಲ್ಲಿಯೇ ಉಗ್ರರು350 ಕೆ.ಜಿ.ಯ ಸ್ಫೋಟಕ ಸಾಗಿಸಲು ಹೇಗೆ ಸಾಧ್ಯವಾಯಿತು?

* ಸಿಆರ್‌ಪಿಎಫ್ ಜವಾನರು ಯಾವ ದಾರಿಯಲ್ಲಿ ಬರುತ್ತಿದ್ದಾರೆ ಎನ್ನುವುದು ಉಗ್ರರಿಗೆ ಹೇಗೆ ತಿಳಿಯಿತು?

* ಸಿಆರ್‌ಪಿಎಫ್‌ ಜವಾನರಿಗೆ ವಾಯುಯಾನ ಸೌಲಭ್ಯವನ್ನು ಏಕೆ ಒದಗಿಸಿಲ್ಲ?

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.