ತಿರುವನಂತಪುರ:ದೇಶದ ಮೊದಲ ಮಂಕಿಪಾಕ್ಸ್ ವೈರಸ್ ಪ್ರಕರಣ ದಕ್ಷಿಣ ಭಾರತದಲ್ಲಿ ಪತ್ತೆಯಾಗುತ್ತಿದ್ದಂತೆಯೇ ವೈರಸ್ ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಕೇರಳದ ಐದು ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ವಿಶೇಷ ಕಟ್ಟೆಚ್ಚರ ವಹಿಸಿದೆ.
ಶಾರ್ಜಾದಿಂದ ತಿರುವನಂತಪುರಕ್ಕೆ ಜುಲೈ 12ರಂದು ಇಂಡಿಗೊ ವಿಮಾನದಲ್ಲಿ ಬಂದಿರುವ ಕೊಲ್ಲಂನ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಸ್ ಸೋಂಕು ಇರುವುದು ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್ಐವಿ) ದೃಢಪಡಿಸಿದ ಮರುವ ದಿನವೇ ಶುಕ್ರವಾರಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಉನ್ನತ ಮಟ್ಟದ ಸಭೆ ನಡೆಸಿದರು.
ಕೊಲ್ಲಂ, ಪತ್ತನಂತಿಟ್ಟ, ಅಲಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳ ಪ್ರಯಾಣಿಕರುಸೋಂಕಿತವ್ಯಕ್ತಿಯ ಜತೆಗೆ ವಿಮಾನದಲ್ಲಿ ಪ್ರಯಾಣಿಸಿರುವುದರಿಂದ ಈ ಐದೂ ಜಿಲ್ಲೆಗಳಲ್ಲಿ ವೈರಸ್ ಹರಡದಂತೆ ಮುನ್ನೆಚ್ಚರಿಕೆಯಾಗಿ ವಿಶೇಷ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ವಿಮಾನದಲ್ಲಿ ಬಂದಿರುವ 164 ಪ್ರಯಾಣಿಕರು ಮತ್ತು ಆರು ಮಂದಿ ವಿಮಾನ ಕ್ಯಾಬಿನ್ ಸಿಬ್ಬಂದಿಯನ್ನು ಈ ಐದು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಇರಿಸಿದ್ದು, ನಿಗಾವಹಿಸಲಾಗಿದೆ. ಸೋಂಕಿತ ವ್ಯಕ್ತಿಯ ಅಕ್ಕಪಕ್ಕದಲ್ಲಿದ್ದವರಲ್ಲಿ 11 ಮಂದಿ ಹೆಚ್ಚಿನ ಅಪಾಯದ ಸಂಪರ್ಕಿತರ ಪಟ್ಟಿಯಲ್ಲಿದ್ದಾರೆ. ರೋಗಿಯ ಪೋಷಕರು, ರೋಗಿ ಪ್ರಯಾಣಿಸಿರುವ ಆಟೋ ಚಾಲಕ, ಟ್ಯಾಕ್ಸಿ ಚಾಲಕ ಹಾಗೂ ಚಿಕಿತ್ಸೆ ನೀಡಿರುವ ಖಾಸಗಿ ಆಸ್ಪತ್ರೆಯ ಚರ್ಮರೋಗ ತಜ್ಞಹೆಚ್ಚಿನ ಅಪಾಯದ ಸಂಪರ್ಕಿತರಾಗಿದ್ದಾರೆ. ಅಲ್ಲದೇ,ವಿಮಾನದಲ್ಲಿ ರೋಗಿಯ ಅಕ್ಕಪಕ್ಕ ಕುಳಿತಿದ್ದ 11 ಮಂದಿ ಸಹಪ್ರಯಾಣಿಕರನ್ನು ಪ್ರಾಥಮಿಕ ಸಂಪರ್ಕಿತರ ಪಟ್ಟಿಯಲ್ಲಿ ಗುರುತಿಸಲಾಗಿದೆ ಎಂದುಸಚಿವೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.