ನವದೆಹಲಿ: ನೈಋತ್ಯ ಮುಂಗಾರು ಸೆಪ್ಟೆಂಬರ್ 25ರಿಂದ ತೀವ್ರತೆ ಕಳೆದುಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.
ಸಾಮಾನ್ಯವಾಗಿ ಜೂನ್ 1ರಿಂದ ಕೇರಳದ ಮೂಲಕ ನೈಋತ್ಯ ಮುಂಗಾರಿನ ಪ್ರವೇಶವಾಗುತ್ತದೆ. ಜುಲೈ 8ರ ವೇಳೆಗೆ ದೇಶದಾದ್ಯಂತ ಆವರಿಸುತ್ತದೆ. ಸೆಪ್ಟೆಂಬರ್ 17ರ ವೇಳೆಗೆ ವಾಯವ್ಯ ಭಾರತದಿಂದ ಕ್ಷೀಣಿಸಲು ಆರಂಭಿಸಿ, ಅಕ್ಟೋಬರ್ 15ರ ವೇಳೆಗೆ ಸಂಪೂರ್ಣವಾಗಿ ತೀವ್ರತೆ ಕಳೆದುಕೊಳ್ಳುತ್ತದೆ.
‘ವಾಯವ್ಯ ಮತ್ತು ಸುತ್ತಮುತ್ತಲಿನ ಪಶ್ಚಿಮ–ಕೇಂದ್ರ ಭಾರತದಲ್ಲಿ ಮುಂದಿನ ಐದು ದಿನ ಕಡಿಮೆ ಮಳೆ ಇರಲಿದೆ. ನೈಋತ್ಯ ಮುಂಗಾರು ಪಶ್ಚಿಮ ರಾಜಸ್ಥಾನ ಪ್ರದೇಶಗಳಲ್ಲಿ ಕ್ಷೀಣಿಸಲು ಅನುಕೂಲಕರ ವಾತಾವರಣ ಇರಲಿದೆ’ ಎಂದು ಐಎಂಡಿ ತಿಳಿಸಿದೆ.
ವಾಯವ್ಯ ಭಾರತದಲ್ಲಿ ಮುಂಗಾರು ಹಿಂದೆಸರಿಯುವುದು ಭಾರತದ ಉಪಖಂಡಗಳಲ್ಲಿ ಕ್ಷೀಣಿಸುವುದರ ಸಂಕೇತ.
ಭಾರತದಲ್ಲಿ ಮುಂಗಾರು ಅವಧಿಯಲ್ಲಿ ಈವರೆಗೆ 780.3 ಮಿ.ಮೀ ಮಳೆ ಸುರಿದಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 832.4 ಮಿ.ಮೀ ಮಳೆ ಸುರಿಯುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.