ನವದೆಹಲಿ: ‘ಅತ್ತೆ ಕಾನೂನು ಪ್ರಕಾರ ಅಳಿಯನ ಉತ್ತರಾಧಿಕಾರಿ ಆಗದೇ ಇರಬಹುದು. ಆದರೆ, ಮೋಟಾರು ವಾಹನ ಕಾಯ್ದೆಯಡಿ ಪರಿಹಾರವನ್ನು ಪಡೆಯಲು ಅವರನ್ನು ಕಾನೂನು ಪ್ರತಿನಿಧಿಯಾಗಿ ಪರಿಗಣಿಸಬಹುದು’ ಎಂದು ಸುಪ್ರೀಂಕೋರ್ಟ್ ಹೇಳಿದೆ.
‘ಅತ್ತೆಯು ತನ್ನ ವೃದ್ದಾಪ್ಯದಲ್ಲಿ ಅಳಿಯ ಮತ್ತು ಮಗಳೊಂದಿಗೆ ವಾಸಿಸುವುದು, ಅವರ ಮೇಲೆ ಅವಲಂಬನೆ ಆಗುವುದು ಸಾಮಾನ್ಯ ಸಂಗತಿ. ಅಳಿಯನ ಸಾವಿನಿಂದ ಆಕೆಗೂ ತೊಂದರೆಯಾಗಬಹುದು. ಹಾಗಾಗಿ ಮೋಟಾರು ವಾಹನ ಕಾಯ್ದೆಯ 166ನೇ ಸೆಕ್ಷನ್ ಅಡಿ ಪರಿಹಾರವನ್ನು ಪಡೆಯಲು ಅತ್ತೆಯನ್ನು ಕಾನೂನು ಪ್ರತಿನಿಧಿಯಾಗಿ ಪರಿಗಣಿಸಬಹುದು’ ಎಂದು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಕೃಷ್ಣಾ ಮುರಾರಿ ಅವರ ಪೀಠವು ಹೇಳಿತು.
2011ರಲ್ಲಿ ಗಣಿತ ಪ್ರಾಧ್ಯಾಪಕ ವೇಣುಗೋಪಾಲನ್ ನಾಯರ್ ಅವರು ಅಪಘಾತದಲ್ಲಿ ಸಾವಿಗೀಡಾಗಿದ್ದರು. ಅವರು ತಮ್ಮ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅತ್ತೆಯೊಂದಿಗೆ ವಾಸವಾಗಿದ್ದರು.
ಈ ಪ್ರಕರಣದಲ್ಲಿ ಅತ್ತೆಯನ್ನು ಪರಿಹಾರ ಪಡೆಯಲು ಕಾನೂನು ಪ್ರತಿನಿಧಿಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ ಕೇರಳ ಹೈಕೋರ್ಟ್, ಪರಿಹಾರ ಮೊತ್ತವನ್ನು ಕಡಿಮೆಗೊಳಿಸುವಂತೆ ಸೂಚಿಸಿತ್ತು.
ಆದರೆ, ಈ ತೀರ್ಪಿಗೆ ತಡೆ ನೀಡಿರುವ ಸುಪ್ರೀಂಕೋರ್ಟ್, ಸಂತ್ರಸ್ತನ ಕುಟುಂಬಕ್ಕೆ ₹85.81 ಲಕ್ಷ ಪಾವತಿಸುವಂತೆ ವಿಮಾ ಕಂಪನಿಗೆ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.