ಮುಂಬೈ: ಹನುಮಾನ್ ಚಾಲಿಸಾ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಪಕ್ಷೇತರ ಸಂಸದೆ ನವನೀತ್ ರಾಣಾ ಕೌರ್ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಎದುರು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.
ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಜನರಿಂದ ನೇರವಾಗಿ ಶಾಸನಸಭೆಗೆ ಆಯ್ಕೆಯಾಗಲು ಕ್ಷೇತ್ರವನ್ನು ಆರಿಸಿಕೊಳ್ಳಲಿ. ಅದೇ ಕ್ಷೇತ್ರದಿಂದ ಅವರ ವಿರುದ್ಧ ನಾನು ಸ್ಪರ್ಧೆ ಮಾಡುತ್ತೇನೆ. ನಾನು ಕಠಿಣ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಚುನಾವಣೆಯನ್ನು ಗೆಲ್ಲುತ್ತೇನೆ. ಆಗ ಅವರಿಗೆ ಜನರ ಶಕ್ತಿ ತಿಳಿಯಲಿದೆ' ಎಂದು ಹೇಳಿದರು.
'ನಾನೇನು ಅಪರಾಧ ಮಾಡಿದೆನೆಂದು ನನ್ನನ್ನು 14 ದಿನಗಳ ಕಾಲ ಜೈಲು ಶಿಕ್ಷೆಗೆ ಕಳಿಸಲಾಯಿತು. ನೀವು ನನ್ನನ್ನು 14 ವರ್ಷಗಳ ಕಾಲ ಜೈಲಿಗೆ ಕಳುಹಿಸಿ. ಆದರೆ, ಶ್ರೀರಾಮ ಮತ್ತು ಹನುಮಾನ್ ಹೆಸರುಗಳನ್ನು ಪಠಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಮುಂದಿನ ಮುಂಬೈ ಪಾಲಿಕೆ ಚುನಾವಣೆಯಲ್ಲಿ ನಾನು ಪ್ರಚಾರದಲ್ಲಿ ಭಾಗಿಯಾಗಿ ರಾಮಭಕ್ತರಿಗೆ ನೆರವು ನೀಡುತ್ತೇನೆ' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.