ADVERTISEMENT

ಉತ್ತರ ಪ್ರದೇಶದ ಬಾಂದಾ ಜೈಲಿಗೆ ಮುಖ್ತಾರ್‌ ಅನ್ಸಾರಿ ಸ್ಥಳಾಂತರ

ಎರಡು ವರ್ಷಗಳಿಂದ ಪಂಜಾಬ್‌ನ ರೂಪ್‌ನಗರ ಜೈಲಿನಲ್ಲಿದ್ದ ಪಾತಕಿ

ಪಿಟಿಐ
Published 7 ಏಪ್ರಿಲ್ 2021, 8:34 IST
Last Updated 7 ಏಪ್ರಿಲ್ 2021, 8:34 IST
ಪಂಜಾಬ್‌ನ ರೂಪ್‌ನಗರ ಜೈಲಿನಿಂದ ಕರೆತರಲಾಗಿರುವ ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್‌ ಅನ್ಸಾರಿಯನ್ನು ಉತ್ತರ ಪ್ರದೇಶದ ಬಾಂದಾ ಜೈಲಿನಲ್ಲಿರಿಸಲಾಗಿದ್ದು, ಜೈಲಿನ ಹೊರಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದೆ  –ಪಿಟಿಐ ಚಿತ್ರ
ಪಂಜಾಬ್‌ನ ರೂಪ್‌ನಗರ ಜೈಲಿನಿಂದ ಕರೆತರಲಾಗಿರುವ ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್‌ ಅನ್ಸಾರಿಯನ್ನು ಉತ್ತರ ಪ್ರದೇಶದ ಬಾಂದಾ ಜೈಲಿನಲ್ಲಿರಿಸಲಾಗಿದ್ದು, ಜೈಲಿನ ಹೊರಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದೆ  –ಪಿಟಿಐ ಚಿತ್ರ   

ಬಾಂದಾ, ಉತ್ತರಪ್ರದೇಶ: ಎರಡು ವರ್ಷಗಳಿಂದ ಪಂಜಾಬ್‌ನ ರೂಪ್‌ನಗರ ಜೈಲಿನಲ್ಲಿದ್ದ ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್‌ ಅನ್ಸಾರಿಯನ್ನು ಬುಧವಾರ ಬೆಳಿಗ್ಗೆ ಉತ್ತರ ಪ್ರದೇಶದ ಬಾಂದಾ ಜೈಲಿಗೆ ಕರೆತರಲಾಯಿತು.

ಪೊಲೀಸರು ಅನ್ಸಾರಿಯನ್ನು ಆಂಬುಲೆನ್ಸ್‌ನಲ್ಲಿ ರೂಪ್‌ನಗರದಿಂದ ಬಾಂದಾ ಜೈಲಿಗೆ ಕರೆತಂದರು. 900 ಕಿ.ಮೀ. ಪ್ರಯಾಣದ ವೇಳೆ ಉತ್ತರ ಪ್ರದೇಶ ಪೊಲೀಸರಿದ್ದ ವಾಹನಗಳಿಂದ ಆಂಬುಲೆನ್ಸ್‌ಗೆ ಭದ್ರತೆ ಒದಗಿಸಲಾಗಿತ್ತು.

‘ಜೈಲಿನ ಒಳಗೆ ಹಾಗೂ ಹೊರಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅನ್ಸಾರಿಯನ್ನು ಕೊಠಡಿ ಸಂಖ್ಯೆ 15ರಲ್ಲಿ ಇರಿಸಲಾಗಿದ್ದು, ಜೈಲಿನಲ್ಲಿರುವ ಇತರ ಕೈದಿಗಳು ಈ ಕೊಠಡಿ ಹತ್ತಿರ ಸುಳಿಯಲು ಅವಕಾಶ ನೀಡುತ್ತಿಲ್ಲ’ ಎಂದು ಬಾಂದಾ ಜೈಲರ್‌ ಪ್ರಮೋದ್‌ ತಿವಾರಿ ತಿಳಿಸಿದರು.

ADVERTISEMENT

ಅನ್ಸಾರಿಯನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಬೇಕು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಆದೇಶಿಸಿತ್ತು. ಈ ಆದೇಶದನ್ವಯ, ಉತ್ತರ ಪ್ರದೇಶ ಪೊಲೀಸರು ರೂಪ್‌ನಗರ ಜೈಲಿನಲ್ಲಿದ್ದ ಅನ್ಸಾರಿಯನ್ನು ಮಂಗಳವಾರ ತಮ್ಮ ವಶಕ್ಕೆ ಪಡೆದರು.

ಬಾಂದಾಕ್ಕೆ ಬರುವ ಮಾರ್ಗಮಧ್ಯೆ, ಅನ್ಸಾರಿ ಇದ್ದ ವಾಹನ, ಭದ್ರತೆಗೆ ನಿಯೋಜನೆಗೊಂಡಿದ್ದ ವಾಹನಗಳು ರಾತ್ರಿ 1.30ರ ವೇಳೆ ಸತ್ತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೆಲ ಕಾಲ ತಂಗಿದ್ದವು. ಇದು ಊಹಾಪೋಹಗಳಿಗೆ ಕಾರಣವಾಗಿತ್ತು. ನಂತರ, ‘ಮೂತ್ರ ವಿಸರ್ಜನೆಗಾಗಿ ಅನ್ಸಾರಿ ಕೇಳಿದ್ದರಿಂದ ಇಲ್ಲಿ ಕೆಲ ಹೊತ್ತು ವಾಹನಗಳು ತಂಗಿದ್ದವು’ ಎಂದು ಸತ್ತಿ ಠಾಣೆ ಅಧಿಕಾರಿ ಕಪಿಲ್‌ ದುಬೆ ಸ್ಪಷ್ಟನೆ ನೀಡಿದರು.

ಕೆಲವಡೆ ದಟ್ಟ ಅರಣ್ಯ ಪ್ರದೇಶದ ಮೂಲಕ ವಾಹನಗಳು ಸಂಚರಿಸಬೇಕಾಗಿತ್ತು. ವನ್ಯಮೃಗಗಳ ಓಡಾಟದ ಕಾರಣದಿಂದ ಭೋಗ್ನಿಪುರ ಹಾಗೂ ಘಟಂಪುರ ನಡುವೆಯೂ ಕೆಲ ಕಾಲ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.