ADVERTISEMENT

ರಾಜ್ಯಸಭೆ ಚುನಾವಣೆ: ಮತ ಹಾಕಲು ನವಾಬ್ ಮಲಿಕ್, ದೇಶಮುಖ್‌ಗೆ ಜಾಮೀನು ನೀಡದ ಕೋರ್ಟ್

ಪಿಟಿಐ
Published 9 ಜೂನ್ 2022, 10:59 IST
Last Updated 9 ಜೂನ್ 2022, 10:59 IST
ನವಾಬ್ ಮಲಿಕ್(ಎಡ), ಅನಿಲ್ ದೇಶಮುಖ್(ಬಲ): ಪಿಟಿಐ ಚಿತ್ರ
ನವಾಬ್ ಮಲಿಕ್(ಎಡ), ಅನಿಲ್ ದೇಶಮುಖ್(ಬಲ): ಪಿಟಿಐ ಚಿತ್ರ   

ಮುಂಬೈ: ಬಂಧನದಲ್ಲಿರುವ ಮಹಾರಾಷ್ಟ್ರದ ಆಡಳಿತಾರೂಢ ಎನ್‌ಸಿಪಿ ಪಕ್ಷದ ಶಾಸಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ನಾಳೆ ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡುವುದು ಅನುಮಾನವಾಗಿದೆ.

ಈ ಇಬ್ಬರು ನಾಯಕರಿಗೂ ಒಂದು ದಿನದಮಟ್ಟಿಗೆ ಜಾಮೀನು ನೀಡಲು ಮುಂಬೈ ನ್ಯಾಯಾಲಯವು ನಿರಾಕರಿಸಿದ್ದು, ಅವರು ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫೆಬ್ರುವರಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧನಕ್ಕೀಡಾಗಿರುವ ನವಾಬ್ ಮಲಿಕ್, ಅಂದಿನಿಂದ ಜೈಲಿನಲ್ಲೇ ಇದ್ದಾರೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸಹ ಜೈಲಿನಲ್ಲಿದ್ದಾರೆ.

ADVERTISEMENT

ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಜಾಮೀನು ನೀಡಬೇಕೆಂದು ಕೋರಿ ಉಭಯ ನಾಯಕರು ಕೋರ್ಟ್‌ ಮೆಟ್ಟಿಲೇರಿದ್ದರು.

ನಾನೊಬ್ಬ ಚುನಾಯಿತ ಶಾಸಕನಾಗಿದ್ದು, ನನ್ನ ಕ್ಷೇತ್ರದ ಜನರನ್ನು ಪ್ರತಿನಿಧಿಸಲು ರಾಜ್ಯಸಭೆಗೆ ಒಬ್ಬ ಸದಸ್ಯನನ್ನು ಆರಿಸುವುದು ನನ್ನ ಕರ್ತವ್ಯವಾಗಿದೆ ಎಂದು ನವಾಬ್ ಮಲಿಕ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಮಹಾರಾಷ್ಟ್ರದಲ್ಲಿ 6 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಆಡಳಿತಾರೂಢ ಶಿವಸೇನೆ ಪಕ್ಷವು ಸಂಜಯ್ ರಾವುತ್, ಸಂಜಯ್ ಪವಾರ್ ಅವರನ್ನು ಕಣಕ್ಕಿಳಿಸಿದೆ. ಪ್ರತಿಪಕ್ಷ ಬಿಜೆಪಿಯಿಂದ ಕೇಂದ್ರ ಸಚಿವ ಪೀಯೂಷ್ ಗೋಯಲ್, ಅನಿಲ್ ಬೊಂಡೆ ಮತ್ತು ಧನಂಜಯ್ ಮಹದಿಕ್ ಸ್ಪರ್ಧಿಸಿದ್ದಾರೆ.

ಆಡಳಿತಾರೂಢ ಮಿತ್ರ ಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ನಿಂದ ಪ್ರಫುಲ್ ಪಟೇಲ್ ಮತ್ತು ಇಮ್ರಾನ್ ಪ್ರತಾಪ್ ಗರ್ಹಿ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.