ಮುಂಬೈ: ಹಿಂದೂ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನೆರವೇರಿಸಲು ಇಲ್ಲಿನ ಮುಸ್ಲಿಂ ಸಮುದಾಯದವರು ನೆರವು ನೀಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ನಗರದ ಸೆವ್ರಿ ಪ್ರದೇಶದಲ್ಲಿ ಪಾಂಡುರಂಗ ಉಬಾಳೆ ಎನ್ನುವವರು ಪತ್ನಿ ಮತ್ತು ಮಗನೊಂದಿಗೆ ದಶಕಗಳಿಂದ ವಾಸಿಸುತ್ತಿದ್ದರು. ಸೋಮವಾರ 72 ವರ್ಷದ ಪಾಂಡುರಂಗ ಉಬಾಳೆ ಸಾವಿಗೀಡಾಗಿದ್ದರು. ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ ವಿವಿಧೆಡೆಯಿಂದ ಪಾಂಡುರಂಗ ಅವರ ಬಂಧುಗಳಿಗೆ ಸೆವ್ರಿ ಪ್ರದೇಶಕ್ಕೆ ಬರಲು ಸಾಧ್ಯವಾಗಲಿಲ್ಲ.
ಅಂತ್ಯಕ್ರಿಯೆಯ ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳಲು ಪತ್ನಿ ಮತ್ತು ಮಗನಿಗೆ ಸಾಧ್ಯವಾಗದ ಕಾರಣ ನೆರೆಯವರಿಗೆ ಮಾಹಿತಿ ನೀಡಿದರು. ತಕ್ಷಣವೇ ಆ ಪ್ರದೇಶದಲ್ಲಿನ ಮುಸ್ಲಿಮರು ಧಾವಿಸಿ ಸಹಾಯಹಸ್ತ ಚಾಚಿದರು.
’ಹಲವು ವರ್ಷಗಳಿಂದ ಪಾಂಡುರಂಗ ಅಂಕಲ್ ನಮ್ಮ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಹಬ್ಬಗಳಲ್ಲಿ ನಾವು ಭಾಗಿಯಾಗುತ್ತಿದ್ದೇವು. ನಾವೆಲ್ಲರೂ ಅವರ ಅಂತ್ಯಕ್ರಿಯೆ ನೆರವೇರಿಸಿದ್ದೇವೆ’ ಎಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅಸೀಫ್ ಶೇಖ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.