ಮುಂಬೈ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಶನಿವಾರ ಬೆದರಿಕೆ ಕರೆಯೊಂದು ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರ ತಂಡವೊಂದು ತನಿಖೆ ನಡೆಸಲು ಬೆಳಗಾವಿಯ ಹಿಂಡಲಗಾ ಜೈಲಿಗೆ ತೆರಳಿದೆ.
‘ನಮ್ಮ ತಂಡವು ಒಬ್ಬ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದೆ. ತನಿಖೆಯು ಪ್ರಾಥಮಿಕ ಹಂತದಲ್ಲಿದೆ’ ಎಂದು ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಅವರು ಭಾನುವಾರ ಹೇಳಿದ್ದಾರೆ.
ಕರೆಯು ಕರ್ನಾಟಕದಿಂದ ಬಂದಿರುವುದಾಗಿ ಪತ್ತೆಯಾಯಿತು. ನಾಗ್ಪುರ ಪೊಲೀಸರ ತಂಡ ಮತ್ತು ಭಯೋತ್ಪಾದನೆ ನಿಗ್ರಹ ದಳವನ್ನು ಬೆಳಗಾವಿಗೆ ಕಳಿಸಲಾಗಿದೆ. ಇದೇ ಜೈಲಿನಲ್ಲಿ ಶಿಕ್ಷೆ ಪಡೆಯುತ್ತಿರುವ, ಭೂಗತಪಾತಕಿ ಜಯೇಶ್ ಕಾಂತಾ ಈ ಕರೆ ಮಾಡಿರುವ ಶಂಕೆ ಇದೆ. ಜೈಲು ಅಧಿಕಾರಿಗಳು ಆತನಿಗೆ ಸೇರಿದ್ದ ದಿನಚರಿಯೊಂದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಪೂರ್ಣ ತನಿಖೆ ನಡೆದ ಬಳಿಕವೇ ಈ ಕುರಿತು ಇನ್ನಷ್ಟು ಮಾತನಾಡಲು ಸಾಧ್ಯ ಎಂದಿದ್ದಾರೆ.
ಶಂಕಿತನ ವಿರುದ್ಧ ಕೊಲೆ, ಕೊಲೆಗೆ ಯತ್ನಕ್ಕೆ ಸಂಬಂಧಿಸಿ ಹಲವಾರು ಮೊಕದ್ದಮೆಗಳು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.