ADVERTISEMENT

ಆನ್‌ಲೈನ್‌ನಲ್ಲಿ ಎನ್‌ಆರ್‌ಸಿ ಪೂರ್ಣಪಟ್ಟಿ

ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ ಇಲ್ಲದವರ ಹೆಸರನ್ನೂ ಒಳಗೊಂಡ ಪಟ್ಟಿ

ಏಜೆನ್ಸೀಸ್
Published 14 ಸೆಪ್ಟೆಂಬರ್ 2019, 20:47 IST
Last Updated 14 ಸೆಪ್ಟೆಂಬರ್ 2019, 20:47 IST
ಸೈನಿಕನ ಕುಟುಂಬವೂ ಹೊರಕ್ಕೆ: 1962ರ ಯುದ್ಧದಲ್ಲಿ ಹೋರಾಡಿದ್ದ ಅಸ್ಸಾಂನ ಭಾಗಿ ಬಹದ್ದೂರ್ ಲಿಂಬು ಅವರ ಮಕ್ಕಳು ಎನ್‌ಆರ್‌ಸಿಯಲ್ಲಿ ಇಲ್ಲ. ತಮ್ಮ ತಂದೆಯ ಸೇನಾ ಪದಕಗಳನ್ನು ಪ್ರದರ್ಶಿಸುತ್ತಿರುವ ಲಿಂಬು ಸೋದರರು. ಹಲವು ಸೈನಿಕ ಕುಟುಂಬಗಳು ಇದೇ ಸ್ಥಿತಿಯಲ್ಲಿವೆ –ಪಿಟಿಐ ಚಿತ್ರ
ಸೈನಿಕನ ಕುಟುಂಬವೂ ಹೊರಕ್ಕೆ: 1962ರ ಯುದ್ಧದಲ್ಲಿ ಹೋರಾಡಿದ್ದ ಅಸ್ಸಾಂನ ಭಾಗಿ ಬಹದ್ದೂರ್ ಲಿಂಬು ಅವರ ಮಕ್ಕಳು ಎನ್‌ಆರ್‌ಸಿಯಲ್ಲಿ ಇಲ್ಲ. ತಮ್ಮ ತಂದೆಯ ಸೇನಾ ಪದಕಗಳನ್ನು ಪ್ರದರ್ಶಿಸುತ್ತಿರುವ ಲಿಂಬು ಸೋದರರು. ಹಲವು ಸೈನಿಕ ಕುಟುಂಬಗಳು ಇದೇ ಸ್ಥಿತಿಯಲ್ಲಿವೆ –ಪಿಟಿಐ ಚಿತ್ರ   

ಗುವಾಹಟಿ : ರಾಷ್ಟ್ರೀಯ ಪೌರತ್ವ ನೋಂದಣಿಗೆ (ಎನ್‌ಆರ್‌ಸಿ) ಅಸ್ಸಾಂನಲ್ಲಿ ಅರ್ಜಿ ಸಲ್ಲಿಸಿದ್ದ ಎಲ್ಲಾ ಅರ್ಜಿದಾರರ ಹೆಸರನ್ನು ಒಳಗೊಂಡ ಪೂರ್ಣಪಟ್ಟಿಯನ್ನು ಅಸ್ಸಾಂನ ಎನ್‌ಆರ್‌ಸಿ ಕಾರ್ಯಾಲಯವು ಶನಿವಾರ ಬಿಡುಗಡೆ ಮಾಡಿದೆ.

‘ಆಗಸ್ಟ್ 31ರಂದು ಬಿಡುಗಡೆ ಮಾಡಿದ್ದು ಎನ್‌ಆರ್‌ಸಿಯ ಪೂರಕ ಪಟ್ಟಿ ಅಷ್ಟೆ. ಈಗ ಬಿಡುಗಡೆ ಮಾಡಿರುವುದು ಅಂತಿಮ ಪಟ್ಟಿ. ನೋಂದಣಿಯಲ್ಲಿ ಸ್ಥಾನಪಡೆದವರು ಮತ್ತು ಕೈಬಿಡಲಾದವರ ಹೆಸರನ್ನು ಪೂರ್ಣಪಟ್ಟಿ ಒಳಗೊಂಡಿದೆ’ ಎಂದು ರಾಜ್ಯ ಎನ್‌ಆರ್‌ಸಿ ಕಾರ್ಯಾಲಯ ಹೇಳಿದೆ.

ಎನ್‌ಆರ್‌ಸಿಗೆ ರಾಜ್ಯದಲ್ಲಿ 3.30 ಕೋಟಿ ಜನರು ಅರ್ಜಿ ಸಲ್ಲಿಸಿದ್ದರು. ಪೌರತ್ವ ನೋಂದಣಿಯಲ್ಲಿ ಸ್ಥಾನಪಡೆದವರ ಹೆಸರನ್ನು ಎನ್‌ಆರ್‌ಸಿ ಕಾರ್ಯಾಲಯವು ಹಂತಹಂತವಾಗಿ ಬಿಡುಗಡೆ ಮಾಡಿತ್ತು. ನೋಂದಣಿಯಲ್ಲಿ ಸ್ಥಾನಪಡೆದವರ ಅಂತಿಮಪಟ್ಟಿಯನ್ನು ಆಗಸ್ಟ್‌ 31ರಂದು ಬಿಡುಗಡೆ ಮಾಡ ಲಾಗಿತ್ತು. ಆ ಪಟ್ಟಿಯಲ್ಲಿ 3.11 ಕೋಟಿ ಜನರಷ್ಟೇ ಸ್ಥಾನಪಡೆದಿದ್ದರು. 19 ಲಕ್ಷ ಜನರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.

ADVERTISEMENT

‘3.30 ಕೋಟಿ ಅರ್ಜಿದಾರರ ಹೆಸರನ್ನೂ ಪೂರ್ಣಪಟ್ಟಿಯಲ್ಲಿ ತೋರಿಸಲಾಗಿದೆ. ನೋಂದಣಿಯಿಂದ ಕೈಬಿಡಲಾದವರ ಹೆಸರು, ಅವರ ಕುಟುಂಬದ ವಿವರ, ಅವರ ಕುಟುಂಬದ ಇತರ ಸದಸ್ಯರು ನೋಂದಣಿಯಲ್ಲಿ ಇದ್ದಾರೆಯೇ? ನೋಂದಣಿಯಿಂದ ಅವರನ್ನು ಕೈಬಿಡಲು ಕಾರಣವಾದ ಅಂಶಗಳ ವಿವರಗಳು ಪೂರ್ಣಪಟ್ಟಿಯಲ್ಲಿ ಇರಲಿದೆ. ಆದರೆ ಪೂರ್ಣಪಟ್ಟಿಯು ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿರಲಿದೆ. ಅರ್ಜಿದಾರರು ತಮ್ಮ ಅರ್ಜಿಯ ಸಂಖ್ಯೆ ಮತ್ತು ಗ್ರಾಮದ ವಿವರಗಳನ್ನು ನಮೂದಿಸಿ, ಆನಲೈನ್‌ನಲ್ಲಿ ಈ ವಿವರಗಳನ್ನು ಪಡೆದುಕೊಳ್ಳಬಹುದು’ ಎಂದು ಮೂಲಗಳು ಮಾಹಿತಿ ನೀಡಿವೆ.

ಎನ್‌ಆರ್‌ಸಿಬಗ್ಗೆ ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಸ್ಥಳೀಯ ನಾಯಕರೂ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಈ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ. ಹೀಗಾಗಿ ರಾಜ್ಯದಲ್ಲಿ ನಿಯೋಜನೆ ಮಾಡಲಾಗಿದ್ದ ಸೇನೆ ಮತ್ತು ಅರೆಸೇನಾ ಪಡೆಗಳ ತುಕಡಿಗಳನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.

ನ್ಯಾಯಮಂಡಳಿಯ ಪರಿಶೀಲನೆ

ಎನ್‌ಆರ್‌ಸಿ ಪಟ್ಟಿಯ ಬಗ್ಗೆ ಅಕ್ಷೇಪ ಇರುವ ಅರ್ಜಿದಾರರು ವಿದೇಶಿಯರ ನ್ಯಾಯಮಂಡಳಿ ಮೊರೆ ಹೋಗಬಹುದು. ಅರ್ಜಿದಾರರು ಅಕ್ರಮ ವಲಸಿಗರೇ ಅಥವಾ ಭಾರತದ ನಿವಾಸಿಗಳೇ ಎಂಬುದನ್ನು ನ್ಯಾಯಮಂಡಳಿ ನಿರ್ಧರಿಸಲಿದೆ

ಸುಪ್ರೀಂ ಕೋರ್ಟ್‌ ಅಂತಿಮ

ನ್ಯಾಯಮಂಡಳಿ ತೀರ್ಪಿನ ವಿರುದ್ಧ ಗುವಾಹಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸ ಬಹುದಾಗಿದೆ. ಅಲ್ಲಿನ ತೀರ್ಪಿನ ವಿರುದ್ಧವೂ ಸುಪ್ರೀಂ ಕೋರ್ಟ್‌ನ ಮೊರೆ ಹೋಗಬಹುದು. ‘ಸುಪ್ರೀಂ’ ತೀರ್ಪಿನ ನಂತರ ಸರ್ಕಾರ ಕ್ರಮತೆಗೆದುಕೊಳ್ಳುತ್ತದೆ

ಕೊನೆಯಲ್ಲಿ ಬಂಧನ

ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲು 120 ದಿನ ಕಾಲಾವಕಾಶವಿದೆ.ಅಗತ್ಯವಿರುವವರಿಗೆ ಕಾನೂನು ಹೋರಾಟದಲ್ಲಿ ಸರ್ಕಾರವೇ ನೆರವು ಮತ್ತು ಮಾರ್ಗದರ್ಶನ ನೀಡಲಿದೆ. ಅಂತಿಮ ತೀರ್ಪಿನ ನಂತರವೇ ವಲಸಿಗರನ್ನು ಬಂಧನ ಕೇಂದ್ರಕ್ಕೆ ಕಳುಹಿಸಲಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.