ಬೆಂಗಳೂರು: ದೇಶದಾದ್ಯಂತ ಇಂದು (ಶನಿವಾರ) ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಹನುಮ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಶಾಸಕ ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.
‘ಶಕ್ತಿ, ಧೈರ್ಯ ಮತ್ತು ಸಂಯಮದ ಸಂಕೇತವಾದ ಭಗವಾನ್ ಹನುಮಾನ್ ಅವರ ಜನ್ಮ ವಾರ್ಷಿಕೋತ್ಸವದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು. ಪವನಪುತ್ರನ ಅನುಗ್ರಹದಿಂದ ಪ್ರತಿಯೊಬ್ಬರ ಜೀವನವು ಯಾವಾಗಲೂ ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನದಿಂದ ತುಂಬಿರಲಿ’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
‘ಎಲ್ಲರಿಗೂ ಹನುಮ ಜಯಂತಿಯ ಶುಭಾಶಯಗಳು’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
‘ನಾಡಿನ ಸಮಸ್ತ ಭಕ್ತ ಜನತೆಗೆ ರಾಮಭಕ್ತ ಹನುಮಂತನ ಜಯಂತಿಯ ಶುಭಕಾಮನೆಗಳು. ನಾಡಿನಲ್ಲಿ ಧರ್ಮ, ಆರೋಗ್ಯ, ಸಂತೃಪ್ತಿ, ಸಮೃದ್ಧಿ ಸದಾ ನೆಲೆಸಲಿ, ಎಲ್ಲಾ ದುರಿತಗಳು ದೂರಾಗುವಂತೆ ಆಂಜನೇಯ ಸ್ವಾಮಿಯ ಕೃಪೆ ಸದಾ ಇರಲಿ ಎಂದು ಪ್ರಾರ್ಥಿಸೋಣ’ ಎಂದು ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
‘ಜಾತಿ, ಮತ, ಬೇಧಗಳಿಂದ ಮುಕ್ತನಾದ ಪವನಪುತ್ರ ಹನುಮ ಜಯಂತಿಯ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ಭಜರಂಗಬಲಿಯ ಆಶೀರ್ವಾದಕ್ಕೆ ಎಲ್ಲರೂ ಪಾತ್ರರಾಗಲಿ ಎಂದು ಹಾರೈಸುತ್ತೇನೆ’ ಎಂದು ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
‘ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ, ನಿಷ್ಠೆಯ ಪ್ರತೀಕವಾದ ಶ್ರೀರಾಮಭಕ್ತ ಶ್ರೀ ಆಂಜನೇಯಸ್ವಾಮಿ ಸ್ಮರಣೆಯಿಂದ ಸಕಲ ಕಷ್ಟಗಳೆಲ್ಲ ಹರಣವಾಗಲಿ ಎಂದು ಪ್ರಾರ್ಥಿಸುವುದಾಗಿ’ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.