ADVERTISEMENT

ಉದಯಪುರ ಟೈಲರ್ ಹತ್ಯೆ ಬೆನ್ನಲ್ಲೇ ನವೀನ್ ಕುಮಾರ್ ಜಿಂದಾಲ್‌ಗೂ ಕೊಲೆ ಬೆದರಿಕೆ

ಪಿಟಿಐ
Published 29 ಜೂನ್ 2022, 12:22 IST
Last Updated 29 ಜೂನ್ 2022, 12:22 IST
ನವೀನ್ ಕುಮಾರ್ ಜಿಂದಾಲ್‌ – ಪಿಟಿಐ ಚಿತ್ರ
ನವೀನ್ ಕುಮಾರ್ ಜಿಂದಾಲ್‌ – ಪಿಟಿಐ ಚಿತ್ರ   

ನವದೆಹಲಿ: ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯಾದ ಬೆನ್ನಲ್ಲೇ ಅದೇ ರೀತಿಯಲ್ಲಿ ಕೊಲೆ ಮಾಡುವುದಾಗಿ ಬಿಜೆಪಿಯ ದೆಹಲಿ ಘಟಕದ ಮಾಧ್ಯಮ ವಿಭಾಗದ ಮಾಜಿ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್‌ಗೂ ಬೆದರಿಕೆಯೊಡ್ಡಲಾಗಿದೆ.

ಇ–ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ಉದಯಪುರದ ಹತ್ಯೆ ವಿಡಿಯೊದ ಜತೆ ಕೊಲೆ ಬೆದರಿಕೆಯುಳ್ಳ ಸಂದೇಶ ಬಂದಿದ್ದು, ತಮಗೆ ಹಾಗೂ ಕುಟುಂಬದವರಿಗೆ ಭದ್ರತೆ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಹಾಗೂ ಜಿಂದಾಲ್ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿಚಾರ ದೇಶ, ವಿದೇಶಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

‘ಬೆಳಿಗ್ಗೆ 6.45ರ ವೇಳೆಗೆ ಉದಯಪುರದ ಕನ್ಹಯ್ಯ ಲಾಲ್ ಹತ್ಯೆ ವಿಡಿಯೊದ ಜತೆಗೆ ಮೂರು ಇ–ಮೇಲ್ ಸಂದೇಶಗಳು ಬಂದಿವೆ. ಅದೇ ರೀತಿ ನನ್ನ ಹಾಗೂ ಕುಟುಂಬದವರನ್ನು ಹತ್ಯೆ ಮಾಡುವ ಬಗ್ಗೆ ಬೆದರಿಕೆಯೊಡ್ಡಲಾಗಿದೆ’ ಎಂದು ಜಿಂದಾಲ್ ಹೇಳಿದ್ದಾರೆ.

‘ಇದು ಮೊದಲ ಬೆದರಿಕೆಯಲ್ಲ. ನೂರಾರು ಬೆದರಿಕೆ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿವೆ. ದೂರವಾಣಿ ಕರೆಗಳು ಹಾಗೂ ಎಸ್‌ಎಂಎಸ್‌ಗಳೂ ಬಂದಿವೆ. ಆದರೆ ದೆಹಲಿ ಪೊಲೀಸರು ನನ್ನ ಭದ್ರತೆ ಹೆಚ್ಚಿಸಿಲ್ಲ. ಹತ್ತಾರು ಬಾರಿ ಪೊಲೀಸ್ ಅಧಿಕಾರಿಗಳಿಗೆ, ಆಯುಕ್ತರಿಗೆ ಪತ್ರ ಬರೆದಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.