ಪಣಜಿ: ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ದಕ್ಷಿಣ ಗೋವಾದ ಸಾವೊ ಜಸಿಂಟೊ ದ್ವೀಪದಲ್ಲಿ ಸ್ವಾತಂತ್ರ್ಯ ದಿನದಂದು ನಿಗದಿಪಡಿಸಿದ್ದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ರದ್ದುಪಡಿಸಿರುವುದಾಗಿ ನೌಕಾಪಡೆ ತಿಳಿಸಿದೆ.
ಈ ಬೆಳವಣಿಗೆಗೆಳ ನಡುವೆ, ‘ನಿಗದಿತ ಕಾರ್ಯಕ್ರಮದಂತೆ ತ್ರಿವರ್ಣ ಧ್ವಜಾರೋಹಣ ನೆರವೇರಿಸುವಂತೆ ನೌಕಾಪಡೆ ಅಧಿಕಾರಿಗಳಿಗೆ ನಾನು ಮನವಿ ಮಾಡಿದ್ದೇನೆ. ಈ ಕಾರ್ಯಕ್ರಮಕ್ಕೆ ಗೋವಾ ಪೊಲೀಸರು ಸಂಪೂರ್ಣ ಸಹಕಾರ ನೀಡುವರು. ಇಂಥ ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ನಡೆಸುತ್ತಿರುವ ‘ಆಜಾದಿ ಕಾ ಅಮೃತ್ ಮಹೋತ್ಸವ'ವದ ಭಾಗವಾಗಿ ಆಗಸ್ಟ್ 13 ಮತ್ತು 15ರ ನಡುವೆ ದ್ವೀಪಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲು ರಕ್ಷಣಾ ಸಚಿವಾಲಯ ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ಗೋವಾ ನೌಕಾಪಡೆಯ ತಂಡವು ಸಾವೊ ಜಸಿಂಟೊ ಸೇರಿದಂತೆ ಗೋವಾ ಸುತ್ತಲಿನ ವಿವಿಧ ದ್ವೀಪಗಳಿಗೆ ಭೇಟಿ ನೀಡಿತ್ತು. ಈ ವೇಳೆಜಸಿಂಟೊ ದ್ವೀಪದ ನಿವಾಸಿಗಳ ವಿರೋಧದ ಹಿನ್ನೆಲೆಯಲ್ಲಿ, ಅಲ್ಲಿ ನಡೆಸಲು ಉದ್ದೇಶಿಸಿದ್ದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು‘ ಎಂದು ಗೋವಾದ ನೌಕಾಪಡೆಯ ಐಎನ್ಎಸ್ ಹಂಸ ನೆಲೆಯ ವಕ್ತಾರರು ಶುಕ್ರವಾರ ಹೇಳಿದ್ದರು.
ದಕ್ಷಿಣ ಗೋವಾ ಜಿಲ್ಲೆಯ ವಾಸ್ಕೊ ಸಮೀಪದಲ್ಲಿ ಜಸಿಂಟೊ ದ್ವೀಪವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.