ರಾಯ್ಪುರ್: ಛತ್ತೀಸಗಡ ವಿಧಾನಸಭೆ ಚುನಾವಣೆಗೆ ಒಂದು ದಿನ ಮೊದಲುಅಂತಗರ್ಗ್ರಾಮದ ಸಮೀಪ ನಕ್ಸಲರು ಮತ್ತು ಭದ್ರತಾಪಡೆಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಆರಂಭವಾಗಿದೆ.ಹಳ್ಳಿಯ ಸಮೀಪ ನಕ್ಸಲರು ಏಳು ಬಾಂಬ್ಗಳನ್ನು ಸ್ಫೋಟಿಸಿದ್ದಾರೆ. ಗುಂಡಿನ ಚಕಮಕಿ ವೇಳೆ ಬಿಎಸ್ಎಫ್ ಸಬ್ ಇನ್ಸ್ಪೆಕ್ಟರ್ ಮಹೇಂದ್ರ ಸಿಂಗ್ ಹುತಾತ್ಮರಾಗಿದ್ದಾರೆ.
ಗಸ್ತು ಕರ್ತವ್ಯಕ್ಕೆತೆರಳಿದ್ದ ಬಿಎಸ್ಎಫ್ ತುಕಡಿಯ ಮೇಲೆ ನಕ್ಸಲರು ಏಕಾಏಕಿ ದಾಳಿ ಮಾಡಿದರು. ಸುಧಾರಿತ ಸ್ಫೋಟಕಗಳನ್ನು ಸ್ಫೋಟಿಸಿದರು. ಈ ವೇಳೆ ಬಿಎಸ್ಎಫ್ ಸಿಬ್ಬಂದಿ ಸಹ ಗುಂಡು ಹಾರಿಸಲು ಆರಂಭಿಸಿದರು. ಘಟನೆಯಲ್ಲಿ ಗಾಯಗೊಂಡಿದ್ದಬಿಎಸ್ಎಫ್ ಅಧಿಕಾರಿ ಮಹೇಂದ್ರ ಸಿಂಗ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹುತಾತ್ಮರಾದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗೋಮ್ ಮತ್ತು ಗತ್ತಕಲ್ ಗ್ರಾಮಗಳ ನಡುವೆ ಹೂತಿಡಲಾಗಿದ್ದ ಏಳು ಸ್ಫೋಟಕಗಳನ್ನು ಒಂದಾದ ಮೇಲೆ ಒಂದರಂತೆ ನಕ್ಸಲರು ಸ್ಫೋಟಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಜಾಪುರದಲ್ಲಿಯೂ ಭದ್ರತಾ ಸಿಬ್ಬಂದಿ ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಗುಂಡೇಟಿನಿಂದ ಮೃತಪಟ್ಟ ಮಾವೋವಾದಿಯೊಬ್ಬನದೇಹವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮತ್ತೋರ್ವನನ್ನು ಬಂಧಿಸಲಾಗಿದೆ.
ಒಂದು ಲಕ್ಷ ಭದ್ರತಾ ಸಿಬ್ಬಂದಿ
ಛತ್ತೀಸಗಡದಲ್ಲಿ ಮೊದಲ ಹಂತದ ಚುನಾವಣೆ ವೇಳೆ ಭದ್ರತೆಗಾಗಿ ಒಂದು ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೊದಲ ಹಂತದಲ್ಲಿ ಮಾವೋವಾದಿಗಳ ಪ್ರಭಾವ ಇರುವ18 ಕ್ಷೇತ್ರಗಳಲ್ಲಿಚುನಾವಣೆ ನಡೆಯಲಿದೆ.ಕಳೆದ 10 ದಿನಗಳಲ್ಲಿ 300ಕ್ಕೂ ಹೆಚ್ಚು ಸುಧಾರಿತ ಸ್ಫೋಟಕಗಳನ್ನು ಭದ್ರತಾಪಡೆಗಳು ಬಸ್ತಾರ್ ವಲಯದಲ್ಲಿ ವಶಪಡಿಸಿಕೊಂಡಿವೆ. ಚುನಾವಣಾ ಪ್ರಕ್ರಿಯೆ ಹಾಳುಗೆಡವುವ ಮಾವೋವಾದಿಗಳ ಸಂಚು ವಿಫಲಗೊಳಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ ಎಂದುನಕ್ಸಲ್ ನಿಗ್ರಹ ಕಾರ್ಯಾಚರಣೆ ವಿಭಾಗದ ಪೊಲೀಸ್ ಮಹಾನಿರ್ದೇಶಕ ಡಿ.ಎಂ.ಅಶ್ವತಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.