ADVERTISEMENT

ಜಾತಿ ಸಂಘರ್ಷ ಪಠ್ಯಕ್ಕೆ ಎನ್‌ಸಿಇಆರ್‌ಟಿ ಕೊಕ್

ಮಾಜಿ ಪ್ರಧಾನಿ ವಾಜಪೇಯಿ ಅಧ್ಯಾಯ ಸೇರ್ಪಡೆ

ಪಿಟಿಐ
Published 18 ಮಾರ್ಚ್ 2019, 18:36 IST
Last Updated 18 ಮಾರ್ಚ್ 2019, 18:36 IST

ನವದೆಹಲಿ: 9ನೇ ತರಗತಿಯ ಇತಿಹಾಸ ಪಠ್ಯದಲ್ಲಿ ಕೆಲವು ಅಧ್ಯಾಯಗಳನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಕೈಬಿಟ್ಟಿದೆ. ಇದರ ಜೊತೆಗೆ, ಜಾತಿ ಸಂಘರ್ಷ ಕುರಿತು ಇದ್ದ ಅಧ್ಯಾಯಗಳನ್ನೂ ತೆಗೆದು ಹಾಕಲಾಗಿದೆ.

ಮಕ್ಕಳಿಗೆ ಕಲಿಕೆಯ ಹೊರೆ ಕಡಿಮೆ ಮಾಡುವುದಕ್ಕಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ನಿರ್ದೇಶಿಸಿದ್ದು ಇದರಂತೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ ಎನ್‌ಸಿಇಆರ್‌ಟಿ,ಭಾರತ ಮತ್ತು ಸಮಕಾಲೀನ ಜಗತ್ತು-1ಎಂಬ ಪಠ್ಯ ಪುಸ್ತಕದಲ್ಲಿ 70 ಪುಟಗಳನ್ನು ಕೈ ಬಿಟ್ಟಿದೆ.

ಮೇ 1822ರಲ್ಲಿ ತಿರುವಾಂಕೂರಿನಲ್ಲಿ ಚನ್ನಾರ್ ಜಾತಿಯ ಮಹಿಳೆಯರು ಮೇಲ್ವಸ್ತ್ರ ಧರಿಸಿದ್ದಕ್ಕಾಗಿ ನಾಯರ್ ಜಾತಿಯವರು ಸಾರ್ವಜನಿಕ ಸ್ಥಳಗಳಲ್ಲಿ ಹಲ್ಲೆ ನಡೆಸಿದ್ದರು. ಇದರ ತರುವಾಯ ಕೆಲವು ವರ್ಷಗಳ ಕಾಲ ವಸ್ತ್ರ ಸಂಹಿತೆ ಬಗ್ಗೆ ಸಂಘರ್ಷಗಳು ನಡೆದಿತ್ತು ಎಂದು ಪಠ್ಯ ಪುಸ್ತಕದಲ್ಲಿತ್ತು. ಇದನ್ನು ತೆಗೆದು ಹಾಕಲಾಗಿದೆ ಎಂದು ಎನ್‌ಸಿಇಆರ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಉಡುಗೆ: ಸಾಮಾಜಿಕ ಇತಿಹಾಸ,ಇತಿಹಾಸ ಮತ್ತು ಕ್ರೀಡೆ ಹಾಗೂ ಕ್ರಿಕೆಟ್ ಕಥೆ,ಗ್ರಾಮೀಣ ಜನ ಮತ್ತು ರೈತರು ಎಂಬ ಅಧ್ಯಾಯಗಳನ್ನು ತೆಗೆದು ಹಾಕಲಾಗಿದೆ.

ವಾಜಪೇಯಿ ಅಧ್ಯಾಯ ಸೇರ್ಪಡೆ:8ನೇ ತರಗತಿಯ ಹಿಂದಿ ಪಠ್ಯ ಪುಸ್ತಕದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕವನವನ್ನು ಎನ್‌ಸಿಇಆರ್‌ಟಿ ಸೇರ್ಪಡೆ ಮಾಡಿದೆ.

ಪರಿಷ್ಕೃತ ಪಠ್ಯ ಪುಸ್ತಕಗಳು ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಸಿದ್ಧವಾಗಲಿವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪಠ್ಯ ಪುಸ್ತಕಗಳಲ್ಲಿ ಈ ರೀತಿ ಬದಲಾವಣೆ ತಂದಿದ್ದು ಇದು ಎರಡನೇ ಬಾರಿ. 2017ರಲ್ಲಿ ಎನ್‌ಸಿಇಆರ್‌ಟಿ 182 ಪಠ್ಯ ಪುಸ್ತಕಗಳಲ್ಲಿ ಕೆಲವು ವಿಷಯಗಳನ್ನು ಸೇರಿಸಿ, ಇನ್ನು ಕೆಲವು ವಿಷಯಗಳನ್ನು ತಿದ್ದಿ, ಇನ್ನು ಕೆಲವು ವಿಷಯಗಳನ್ನು ನವೀಕರಿಸುವ ಮೂಲಕ ಒಟ್ಟು 1,334 ಬದಲಾವಣೆಗಳನ್ನು ತಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.