ADVERTISEMENT

ಸಂವೇದಿ ತಂತ್ರಜ್ಞಾನದ ಹೊಸ ಅನ್ವೇಷಣೆ: ತಾಂತ್ರಿಕ ಪರಿಣತರಿಗೆ ಡಿಆರ್‌ಡಿಒ ಸಲಹೆ

ಪಿಟಿಐ
Published 6 ಆಗಸ್ಟ್ 2021, 12:12 IST
Last Updated 6 ಆಗಸ್ಟ್ 2021, 12:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಾಲಸೋರ್, ಒಡಿಶಾ: ವಿಶ್ವದರ್ಜೆಯ ಗುಣಮಟ್ಟಕ್ಕೆ ಅನುಗುಣವಾಗಿ ರಕ್ಷಣಾ ಕ್ಷೇತ್ರಕ್ಕೆ ಅನ್ವಯಿಸಿ ಸಂವೇದಿ ತಂತ್ರಜ್ಞಾನ ಮತ್ತು ಪರಿಕರಗಳ ವಲಯದಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಅಗತ್ಯವಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ‌ಆರ್‌ಡಿಒ) ಅಧ್ಯಕ್ಷ ಡಾ.ಜಿ.ಸತೀಶ್‌ ರೆಡ್ಡಿ ಅವರು ಪ್ರತಿಪಾದಿಸಿದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಅವರು ಗುರುವಾರ ನಡೆದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್‌ ಎಂಜಿನಿಯರುಗಳ ಸಂಸ್ಥೆಯ 2ನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಭವಿಷ್ಯದ ಸವಾಲುಗಳನ್ನು ಎದುರಿಸಲು ಸಂವೇದಿ ತಂತ್ರಜ್ಞಾನ (ರೇಂಜ್ ಟೆಕ್ನಾಲಜಿ) ಕುರಿತ ಅನ್ವೇಷಣೆಗಳ ಪ್ರಯೋಗಾರ್ಥ ಪರೀಕ್ಷೆ ಮತ್ತು ಸಾಮರ್ಥ್ಯದ ಪರಿಶೀಲನೆ ಅಗತ್ಯ. ಈ ನಿಟ್ಟಿನಲ್ಲಿ ಸಮ್ಮೇಳನವು ಚರ್ಚಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಜಗತ್ತಿನ ವಿವಿಧ ಭಾಗಗಳ ಪರಿಣತರು ಭಾಗವಹಿಸಲಿದ್ದು, ತಂತ್ರಜ್ಞಾನದ ಪ‍್ರಗತಿ ಕುರಿತಂತೆ ವಿಷಯ ಮಂಡಿಸುವರು. ಚಾಂದಿಪುರದಲ್ಲಿ ಇರುವ ಐಟಿಆರ್ ಕೇಂದ್ರವು ಕಾರ್ಯಕ್ರಮವನ್ನು ಆಯೋಜಿಸಿತ್ತು.

ಆಯಾ ವಿಷಯ ಪರಿಣತರಿಂದ 250ಕ್ಕೂ ಹೆಚ್ಚು ತಾಂತ್ರಿಕ ವಿಷಯಗಳು ಮಂಡನೆಯಾಗಲಿವೆ. ವಿಶೇಷ ತಾಂತ್ರಿಕ ಸಮಿತಿಯು ಮಂಡನೆಯಾಗುವ ವಿಷಯಗಳನ್ನು ಆಯ್ಕೆ ಮಾಡಿದೆ. ಅಲ್ಲದೆ, ವರ್ಚುವಲ್ ಸ್ವರೂಪದಲ್ಲಿ ಔದ್ಯಮಿಕ ಪ್ರದರ್ಶನವು ನಡೆಯಲಿದ್ದು, ದೇಶ, ವಿದೇಶಗಳ 25ಕ್ಕೂ ಅಧಿಕ ಉದ್ಯಮಗಳು, ಸಂಸ್ಥೆಗಳು ತಮ್ಮ ನವೀನ ಉತ್ಪನ್ನಗಳನ್ನು ಪ್ರದರ್ಶಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.