ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾನುವಾರ ಸಂಪುಟ ಪುನಾರಚನೆ ಮಾಡಿದ್ದು, 13 ಶಾಸಕರು ಸಂಪುಟ ದರ್ಜೆ ಹಾಗೂ ಎಂಟು ಶಾಸಕರು ರಾಜ್ಯ ಸಚಿವ(ಸ್ವತಂತ್ರ ಖಾತೆ)ರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಐವರು ಮಹಿಳೆಯರು ಸೇರಿದಂತೆ 12 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.ಲೋಕಸೇವಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಡಿ ಶಾಸಕರಾದ ಜಗನ್ನಾಥ್ ಸರಕಾ, ನಿರಂಜನ್ ಪೂಜಾರಿ ಮತ್ತು ಆರ್.ಪಿ. ಸ್ವೈನ್ ಸೇರಿದಂತೆ 13 ಶಾಸಕರಿಗೆ ರಾಜ್ಯಪಾಲ ಗಣೇಶಿ ಲಾಲ್ ಅವರು ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನ ಬೋಧಿಸಿದರು.
ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಲಾಗಿದೆ. ಶನಿವಾರವಷ್ಟೇ ಎಲ್ಲ 20 ಸಚಿವರು ರಾಜೀನಾಮೆ ಸಲ್ಲಿಸುವ ಮೂಲಕ ಸಂಪುಟ ಪುನಾರಚನೆಗೆ ದಾರಿ ಮಾಡಿಕೊಟ್ಟಿದ್ದರು. ಮೊದಲ ಬಾರಿಗೆ ಪಟ್ನಾಯಕ್ ಅವರು ಎಲ್ಲ 21 ಸ್ಥಾನವನ್ನು ಭರ್ತಿ ಮಾಡಿದ್ದಾರೆ.ಸರ್ಕಾರಿಯಾ ಆಯೋಗದ ಶಿಫಾರಸು ಪ್ರಕಾರ, ಒಡಿಶಾ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 22 ಸಚಿವರನ್ನು ಹೊಂದಬಹುದು.
ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಯುವಜನರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ. ರಾಜೀನಾಮೆ ನೀಡಿದ 20 ಸಚಿವರ ಪೈಕಿ ಒಂಬತ್ತು ಮಂದಿಯನ್ನು ಮತ್ತೆ ಸಂಪುಟಕ್ಕೆ ಪಟ್ನಾಯಕ್ ಸೇರಿಸಿಕೊಂಡಿದ್ದಾರೆ.
ವಿಧಾಸಭಾ ಸ್ಪೀಕರ್ ಎಸ್.ಎನ್.ಪಾಟ್ರೊ ಸಹ ರಾಜೀನಾಮೆ ಸಲ್ಲಿಸಿದ್ದು, ಆದರೆ ಕಾರಣ ತಿಳಿದು ಬಂದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.