ನವದೆಹಲಿ: ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಮತ್ತೆ ನಾಲ್ವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ. ಈ ಪೈಕಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳಾದ ಅಬ್ದುಲ್ ನಾಸೀರ್, ನೌಶದ್, ಅಬ್ದುಲ್ ರಹಮಾನ್ ಹಾಗೂ ಅತೀಕ್ ಅಹ್ಮದ್ ವಿರುದ್ಧ ಎರಡನೇ ಪೂರಕ ಆರೋಪ ಪಟ್ಟಿ ದಾಖಲಿಸಿದೆ.
ಎನ್ಐಎ ತನಿಖೆ ಪ್ರಕಾರ, ನಾಸೀರ್, ನೌಶದ್ ಹಾಗೂ ರಹಮಾನ್ ಅವರು ಹತ್ಯೆ ನಡೆಸಿದ ಆರೋಪಿಗಳಿಗೆ ಮೈಸೂರು, ಚಾಮರಾಜನಗರ ಹಾಗೂ ಈರೋಡ್ನಲ್ಲಿ ಆಶ್ರಯ ಕಲ್ಪಿಸಿದ್ದರು ಎಂದು ತಿಳಿಸಿದೆ.
ಈ ಮೂಲಕ ಈ ಪ್ರಕರಣದಲ್ಲಿ 27 ಮಂದಿ ವಿರುದ್ಧ ಆರೋಪಪಟ್ಟಿ ದಾಖಲಿಸಿದಂತಾಗಿದೆ. ಇದರಲ್ಲಿ ಆರು ಮಂದಿ ತಲೆಮರೆಸಿಕೊಂಡಿದ್ದಾರೆ.
2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಎರಡು ಮೋಟರ್ ಸೈಕಲ್ನಲ್ಲಿ ಬಂದಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಕಾರ್ಯಕರ್ತರು ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.