ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಭಾರತೀಯ ಏಜೆಂಟ್ ವಿರುದ್ಧ ಬೇಹುಗಾರಿಕೆ ಪ್ರಕರಣದಡಿ ಎನ್ಐಎ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
‘ಗುಜರಾತ್ನ ಪಶ್ಚಿಮ ಕಚ್ ಜಿಲ್ಲೆಯ ರಜಕ್ಭಾಯ್ ಕುಂಭರ್ ವಿರುದ್ಧ ಎನ್ಐಎ ಗುರುವಾರ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ’ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಪಾಕಿಸ್ತಾನದ ಐಎಸ್ಐನೊಂದಿಗೆ ಭಾರತದ ಕಾರ್ಯತಂತ್ರದ ಮಹತ್ವದ ಮಾಹಿತಿ, ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿರುವ ಆರೋಪದಡಿ ಉತ್ತರ ಪ್ರದೇಶದ ಚಂಡೋಲಿ ಜಿಲ್ಲೆಯ ಎಂ.ಡಿ. ರಶೀದ್ ಎಂಬಾತನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಬಳಿಕ ಏಪ್ರಿಲ್ನಲ್ಲಿ ಈ ಪ್ರಕರಣವನ್ನು ಮರು ನೋಂದಾಯಿಸಿ, ಎನ್ಐಎ ತನಿಖೆಯನ್ನು ಆರಂಭಿಸಿತು.
ಕಳೆದ ವರ್ಷ ಸೆಪ್ಟೆಂಬರ್ 30 ರಂದು ಕುಂಭರ್ನನ್ನು ಬಂಧಿಸಲಾಗಿತ್ತು.
‘ರಜಕ್ಭಾಯ್ ಕುಂಭರ್ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾನೆ. ಎರಡನೇ ಭೇಟಿ ಬೇಳೆ ಈತ, ಐಎಸ್ಐನ ಸಿಬ್ಬಂದಿ ಹಮೀದ್ನನ್ನು ಭೇಟಿಯಾಗಿ, ಆತನಿಗೆ ಮಹತ್ವದ ಮಾಹಿತಿಗಳನ್ನು ನೀಡಿದ್ದಾನೆ. ಬಳಿಕ ಕುಂಭರ್ ತನಗೆ ಮಾಹಿತಿ ನೀಡಿದ ರಶೀದ್ ಖಾತೆಗೆ ಹಣ ವರ್ಗಾಯಿಸಿದ್ದಾನೆ’ ಎಂದು ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.