ನವದೆಹಲಿ:ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲಿನ ದಾಳಿಯ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಹಿಸಿಕೊಂಡಿದೆ.
ಪುಲ್ವಾಮಾ ದಾಳಿಯ ಆರಂಭದ ತನಿಖೆಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸುತ್ತಿದ್ದರು. ಎನ್ಐಎ ಹೊಸದಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗೆ ಹೊಸ ತಂಡ ರಚಿಸಿದೆ ಎಂದು ಮೂಲಗಳು ಹೇಳಿವೆ.
ಈ ತಂಡವು ಪುಲ್ವಾಮಾ ಠಾಣೆಯ ಪೊಲೀಸರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದೆ. ದಾಳಿಯ ಸ್ಥಳಕ್ಕೂ ತೆರಳಿ ಮಾಹಿತಿ ಪಡೆದುಕೊಂಡಿದೆ.ಸ್ಫೋಟಕದ ಮಾದರಿಯನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ವಶಕ್ಕೆ ಪಡೆದಿರುವಏಳು ಶಂಕಿತರನ್ನೂ ತನಿಖಾಧಿಕಾರಿಗಳು ಭೇಟಿ ಮಾಡಿ, ವಿಚಾರಣೆ ನಡೆಸಿದ್ದಾರೆ. ಈ ದಾಳಿಗೆ ಹೇಗೆಸಂಚು ರೂಪಿಸಲಾಗಿತ್ತು ಮತ್ತುಅದನ್ನು ಹೇಗೆ ಕಾರ್ಯಗತಗೊಳಿಸಲಾಯಿತು ಎಂಬುದನ್ನು ಪತ್ತೆ ಮಾಡುವತ್ತ ತನಿಖಾಧಿಕಾರಿಗಳು ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪಾಕಿಸ್ತಾನಕ್ಕೆ ಸಾಕ್ಷ್ಯ ಒದಗಿಸಬೇಕಿಲ್ಲ
‘ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ಕೈವಾಡವಿದೆ ಎಂಬುದರ ಸಾಕ್ಷ್ಯಗಳನ್ನು ಪಾಕಿಸ್ತಾನಕ್ಕೆ ನೀಡುವುದಿಲ್ಲ. ಬದಲಿಗೆ ಆ ಸಾಕ್ಷ್ಯಗಳನ್ನು ನಮ್ಮ ಮಿತ್ರರಾಷ್ಟ್ರಗಳಿಗೆ ಹಂಚುತ್ತೇವೆ. ಆ ಮೂಲಕ ಪಾಕಿಸ್ತಾನದ ಬಣ್ಣ ಬಯಲು ಮಾಡುತ್ತೇವೆ’ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಮುಂಬೈ ಮತ್ತು ಪಠಾಣಕೋಟ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಸಾಕಷ್ಟು ಸಾಕ್ಷ್ಯ ನೀಡಿದ್ದೆವು. ಆದರೆ ಭಾರತ ಸರಿಯಾದ ಸಾಕ್ಷ್ಯಗಳನ್ನೇ ಒದಗಿಸಲಿಲ್ಲ’ ಎಂದು ಪಾಕಿಸ್ತಾನ ಆರೋಪಿಸಿತ್ತು. ಹೀಗಾದರೆ ಅದಕ್ಕೆ ಸಾಕ್ಷ್ಯಗಳನ್ನು ಒದಗಿಸಿ ಪ್ರಯೋಜನ ಏನು’ ಎಂದು ಅವರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.